ಮಂಗಳೂರು : ಯುದ್ದಪೀಡಿತ ರಾಷ್ಟ್ರವಾದ ಉಕ್ರೇನ್ನಲ್ಲಿ ರಷ್ಯಾದ ರಾಕೆಟ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ನವೀನ್ ಬಲಿಯಾಗಿದ್ದು, ರಕ್ಷಣೆ ನೀಡುವಲ್ಲಿ ಕೇಂದ್ರ ಸರ್ಕಾರವು ಸಂಪೂರ್ಣ ವಿಫಲವಾಗಿರುವುದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ಲಾಕ್ ಟವರ್ ಎದುರಿನಲ್ಲಿ ಮೊಂಬತ್ತಿ ಪ್ರತಿಭಟನೆ ನಡೆಯಿತು.
ನಮ್ಮ ದೇಶದ ಹಲವಾರು ವಿದ್ಯಾರ್ಥಿಗಳು ಉನ್ನತ ವಿದ್ಯಾರ್ಜನೆಗಾಗಿ ತೆರಳಿ ಸಿಲುಕಿದ್ದಾರೆ,ರಕ್ಷಣೆಗಾಗಿ ಭಾರತದ ರಾಯಭಾರಿ ಕಚೇರಿ ಮತ್ತು ಪ್ರಧಾನಿ, ಸಚಿವರನ್ನು ಪರಿಪರಿಯಾಗಿ ವಿನಂತಿಸುತ್ತಿದ್ದರೂ ಇನ್ನೂ ಕೂಡ ಯುದ್ದಪೀಡಿತ ರಾಷ್ಟ್ರದಲ್ಲಿ ಜೀವಭಯದಿಂದ ಕಂಗಾಲಾಗಿದ್ದಾರೆ. ಆ ಪೈಕಿ ರಾಜ್ಯದ ನವೀನ್ ಎಂಬ ವಿದ್ಯಾರ್ಥಿ ರಷ್ಯಾದ ರಾಕೆಟ್ ದಾಳಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮ ಪ್ರಜೆಗಳ ರಕ್ಷಿಸುವಲ್ಲಿ ವಿಫಲವಾಗಿದೆ.
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕದನ ಪೀಡಿತ ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಸಹಿತ ಎಲ್ಲರನ್ನೂ ರಕ್ಷಣೆ ಮಾಡಬೇಕು. ದೇಶದ ಜನರು ವಿದೇಶಗಳಲ್ಲಿ ಜೀವದ ಅಪಾಯವನ್ನೆದುರಿಸುವಾಗ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಬೇಜವಾಬ್ದಾರಿಯಿಂದ ವರ್ತಿಸುವ ಪರಿಣಾಮವೇ ಕರ್ನಾಟಕ ಇಂದು ಒಂದು ಅಮೂಲ್ಯ ಜೀವವನ್ನು ಕಳೆದುಕೊಂಡಿದೆ. ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ತಕ್ಷಣವೇ ಪರಿಹಾರ ಘೋಷಣೆ ಮಾಡಬೇಕು ಎಂದು ಕ್ಯಾಂಪಸ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷ ಶರ್ಫುಧ್ಧೀನ್ ಬಜ್ಪೆ ಆಗ್ರಹಿಸಿದರು.
ತಮ್ಮ ದೇಶದ ಜನರ ಹಿತ ಬಯಸುವ ಎಲ್ಲಾ ದೇಶಗಳು ಉಕ್ರೇನಿನ ಮೇಲೆ ರಷ್ಯದ ಬೀಕರ ಧಾಳಿಯ ಈ ಸಂದರ್ಭದಲ್ಲಿ ತಮ್ಮ ದೇಶದ ಜನರನ್ನು ಕರೆಸಿಕೊಂಡ್ಡಿದ್ದಾರೆ ಆದರೆ ನಮ್ಮ ದೇಶ ಮಾತ್ರ ಅತಂತ್ರ ಸ್ಥಿತಿಯಲ್ಲಿರುವ ದೇಶದ ಜನರನ್ನು ವಾಪಸು ಕರೆಸಿಕೊಳ್ಳದ ಕಾರಣ ಇವತ್ತು ಕರ್ನಾಟಕ ಒಂದು ಜೀವವನ್ನು ಕಳೆದುಕೊಂಡಿದೆ ಎಂದು ಉಸಾಮ ಗಂಗೊಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೋಡಿ, ಜಿಲ್ಲಾ ಜೊತೆ ಕಾರ್ಯದರ್ಶಿ ಶಾಹಿಕ್, ಜಿಲ್ಲಾ ಕೋಶಾಧಿಕಾರಿ ಸೈಫ್ ಮತ್ತು ಜಿಲ್ಲಾ ಮುಖಂಡ ಅನ್ಸಾರ್ ಉಪಸ್ಥಿತರಿದ್ದರು.