ಬಂಟ್ವಾಳ: ಬೆಲೆ ಏರಿಕೆ ಸೇರಿದಂತೆ ಬಿಜೆಪಿಯ ಆಡಳಿತ ವೈಫಲ್ಯವನ್ನು ಮರೆಮಾಚಲು ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡಲಾಗುತ್ತಿದ್ದು, ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿರುವ ಈಶ್ವರಪ್ಪನವರು ಪರೋಕ್ಷವಾಗಿ ಅಲ್ಲಿನ ರಾಷ್ಟ್ರಧ್ವಜವನ್ನು ತೆಗೆದುಹಾಕುವ ವಿಚಾರ ಹೇಳಿದ್ದು, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು.
ಅವರು ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿ ರಾಜೀನಾಮೆಗೆ ಒತ್ತಾಯಿಸಿ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಪದೇ ಪದೇ ಇಂತಹ ಹೇಳಿಕೆ ನೀಡುತ್ತಿದ್ದು, ಹಿಂದೆ ಸಂವಿಧಾನ ಬದಲಾವಣೆ ವಿಚಾರವನ್ನೂ ಅವರು ಮಾತನಾಡಿದ್ದರು. ಕಾಲೇಜು ಮುಖವನ್ನೇ ನೋಡದೆ ಸಿ.ಟಿ.ರವಿಯವರು ಜೆಎನ್ಯುನ ವಿದ್ಯಾರ್ಥಿ ನಾಯಕರುಗಳ ಕುರಿತು ತುಕುಡೇ ತುಕುಡೇ ಗ್ಯಾಂಗ್ ಎಂದು ಅಪಮಾನ ಮಾಡುತ್ತಿದ್ದಾರೆ.
ಸಚಿವ ಈಶ್ವರಪ್ಪನವರು ಈ ಹಿಂದೆಯೂ ಅನೇಕ ಬಾರಿ ತಲೆ ಬುಡ ಇಲ್ಲದ ಮಾತುಗಳನ್ನು ಹೇಳಿದ್ದರು. ಹೀಗಾಗಿ ಅವರು ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ಅವರು ಮಾತನಾಡಿ, ಸಚಿವ ಈಶ್ವರಪ್ಪನವರು ತಮ್ಮ ಘನತೆಯನ್ನು ಮರೆತು ಧರ್ಮ, ಕೇಸರಿ ಧ್ವಜದ ಕುರಿತು ಮಾತನಾಡುತ್ತಿದ್ದಾರೆ. ಹೀಗಾಗಿ ಅವರ ಹೇಳಿಕೆಯನ್ನು ದೇಶಪ್ರೇಮಿಗಳಾದ ನಾವೆಲ್ಲರೂ ಖಂಡಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್ ಹಾಗೂ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ಕುಮಾರ್ ಶೆಟ್ಟಿ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಲೋಲಾಕ್ಷ ಶೆಟ್ಟಿ, ಗಾಯತ್ರಿ, ವಾಸು ಪೂಜಾರಿ ಲೊರೆಟ್ಟೊ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸುದರ್ಶನ್ ಜೈನ್, ಐಡಾ ಸುರೇಶ್, ಮಧುಸೂದನ್ ಶೆಣೈ, ರಿಯಾಝ್ , ಜಗದೀಶ್ ಕೊಯಿಲ, ವೆಂಕಪ್ಪ ಪೂಜಾರಿ, ಪದ್ಮನಾಭ ನರಿಂಗಾನ, ಸುಭಾಶ್ಚಂದ್ರ ಶೆಟ್ಟಿ, ಲೋಕೇಶ್ ಸುವರ್ಣ, ಮಲ್ಲಿಕಾ ಪಕ್ಕಳ ಮೊದಲಾದವರಿದ್ದರು.
ಈ ವೇಳೆ ಸಚಿವ ಈಶ್ವರಪ್ಪ ಅವರ ಪ್ರತಿಕೃತಿಯನ್ನು ದಹಿಸಲಾಯಿತು.