News Karnataka Kannada
Monday, April 29 2024
ಮಂಗಳೂರು

ಆಟೋ ಬಳಿಕ ಮಲ್ಲಿಗೆ ವ್ಯಾಪಾರಕ್ಕಿಳಿದ ಹಿಂದೂ ಸಂಘಟನೆಗಳು

Local News
Photo Credit : News Kannada

ಪುತ್ತೂರು : ದಕ್ಷಿಣಕನ್ನಡ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ ಎಪ್ರಿಲ್ 10 ರಿಂದ 20 ತನಕ ಬಹಳ ಅದ್ಧೂರಿ ಹಾಗು ವಿಜೃಂಭಣೆಯಿಂದ ನಡೆಯುತ್ತಿದೆ. ರಾಜ್ಯದಲ್ಲಿ ಹಿಜಾಬ್ ಪ್ರಕರಣದ ಗೊಂದಲದ ಬಳಿಕ ದೇವಸ್ಥಾನಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎನ್ನುವ ಹಿಂದೂ ಸಂಘಟನೆಗಳ ಒತ್ತಾಯದ ಹಿನ್ನಲೆಯಲ್ಲಿ ಈ ಬಾರಿ ಪುತ್ತೂರು ಜಾತ್ರೆಗೆ ಅನ್ಯಮತೀಯ ವ್ಯಾಪಾರಿಗಳಿಗೆ ವ್ಯವಹಾರ ಮಾಡಲು ಸಂಪೂರ್ಣ ನಿಶೇಧ ಹೇರಲಾಗಿದೆ.

ಈಗಾಗಲೇ ದೇವರ ಗದ್ದೆಯಲ್ಲಿ 300 ಕ್ಕೂ ಮಿಕ್ಕಿದ ವಿವಿಧ ಅಂಗಡಿಗಳು ತಲೆಎತ್ತಿವೆ. ಪುತ್ತೂರು ಜಾತ್ರೆಯಲ್ಲಿ ಅತ್ಯಂತ ಹೆಚ್ಚು ಜನ ಸೇರುವಂತಹ ಎಪ್ರಿಲ್ 16 ರಂದು ನಡೆಯುವ ಉಳ್ಳಾಲ್ತಿ ದೈವ ಮತ್ತು ಮಹಾಲಿಂಗೇಶ್ವರ ದೇವರ ಭೇಟಿ ಹಾಗು ಎಪ್ರಿಲ್ 17 ರಂದು ನಡೆಯುವ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ, ಸಿಡಿಮದ್ದು ಪ್ರದರ್ಶನವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅಂಗಡಿಗಳನ್ನು ಹೆಚ್ಚಿನ ಹಣ ನೀಡಿ ಹರಾಜಿನಲ್ಲಿ ಪಡೆದುಕೊಳ್ಳುತ್ತಾರೆ.

ಆದರೆ ಉಳ್ಳಾಲ್ತಿ ಮತ್ತು ಮಹಾಲಿಂಗೇಶ್ವರ ದೇವರ ಭೇಟಿ ದಿನದಂದು ಜಾತ್ರೆ ಗದ್ದೆಯ ಹೊರಗೆ ಮಲ್ಲಿಗೆ ವ್ಯಾಪಾರಕ್ಕೆ ಹೆಚ್ಚಿನ ಬೇಡಿಕೆಯಿದೆ. ಪುತ್ತೂರಿನ ಬಲ್ನಾಡಿನಿಂದ ಮೆರವಣಿಗೆಯ ಮೂಲಕ ಮಹಾಲಿಂಗೇಶ್ವರ ಸನ್ನಿಧಿಗೆ ಆಗಮಿಸುವ ಉಳ್ಳಾಲ್ತಿ ದೈವಕ್ಕೆ ಹಾದಿಯುದ್ದಕ್ಕೂ ಮಲ್ಲಿಗೆಯ ಹರಕೆ ನೀಡುವ ವಾಡಿಕೆ ತಲತಲಾಂತರದಿಂದ ಬೆಳೆದುಕೊಂಡು ಬಂದಿದೆ. ಈ ಮಲ್ಲಿಗೆಯ ವ್ಯಾಪಾರದಲ್ಲಿ ಈ ಹಿಂದೆ ಅನ್ಯಮತೀಯರೂ ಮಲ್ಲಿಗೆ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಹಿಜಾಬ್ ಗೊಂದಲದ ಬಳಿಕ ಅನ್ಯಮತೀಯರಿಗೆ ಮಲ್ಲಿಗೆ ವ್ಯಾಪಾರಕ್ಕೂ ಅವಕಾಶ ನೀಡಬಾರದು ಹಾಗು ಮಲ್ಲಿಗೆಯನ್ನು ಹಿಂದೂಗಳ ಅಂಗಡಿಗಳಿಂದಲೇ ಭಕ್ತಾಧಿಗಳು ಖರೀದಿಸಬೇಕು ಎನ್ನುವ ಮನವಿಯನ್ನು ಹಿಂದೂ ಸಂಘಟನೆಗಳು ಮಾಡಿವೆ.

ಉಳ್ಳಾಲ್ತಿ ದೇವರ ಭೇಟಿಯ ಒಂದೇ ದಿನ ಸುಮಾರು 50 ಲಕ್ಷಕ್ಕೂ ಮಿಕ್ಕಿದ ಮೌಲ್ಯದ ಮಲ್ಲಿಗೆ ವ್ಯಾಪಾರವಾಗುತ್ತಿದ್ದು, ಹಿಂದೂಗಳ ಹಬ್ಬವಾಗಿರುವುದಿಂದ ಹಿಂದೂಗಳಿಂದಲೇ ಭಕ್ತಾಧಿಗಳು ಮಲ್ಲಿಗೆಯನ್ನು ಖರೀದಿಸಬೇಕೆಂದು ಹಿಂದೂ‌ಸಂಘಟನೆಗಳು ಮನವಿ ಮಾಡಿದೆ. ಈ ಕಾರಣಕ್ಕಾಗಿ ಬಲ್ನಾಡಿನಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಹಾದಿಯಲ್ಲೆಲ್ಲಾ ಹಿಂದೂ‌ ಸಂಘಟನೆಗಳು ಮಲ್ಲಿಗೆಯ ಸ್ಟಾಲ್ ಗಳನ್ನು ಹಾಕಿವೆ. ಹಿಂದೂ ಹಬ್ಬಗಳ ದಿನ ಹಿಂದೂಗಳಿಂದ ವ್ಯಾಪಾರ ಗಳಿಸಿದ ಹಣವನ್ನು ಹಿಂದೂ ವಿರೋಧಿ ಕೃತ್ಯಗಳಿಗೆ ಬಳಸಲಾಗುತ್ತಿದ್ದು, ಇದೇ ಕಾರಣಕ್ಕಾಗಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಪ್ರಯುಕ್ತ ನಡೆಯುವ ಉಳ್ಳಾಲ್ತಿ ದೈವದ ಭೆಟಿಯ ದಿನ ಮಲ್ಲಿಗೆಯ ವ್ಯಾಪಾರವನ್ನು ಆರಂಭಿಸಿದೆ.

ಕಳೆದ ಏಳು ವರ್ಷಗಳಿಂದ ಈ ಮಲ್ಲಿಗೆ ವ್ಯಾಪಾರವನ್ನು ಮಾಡಲು ಆರಂಭಿಸಲಾಗಿದ್ದು, ಈ ಬಾರಿ ಮಾತ್ರ ಶೇಕಡಾ ನೂರಕ್ಕೆ ನೂರು ಹಿಂದೂಗಳ ಮೂಲಕವೇ ಮಲ್ಲಿಗೆ ವ್ಯಾಪಾರವನ್ನು ಮಾಡಿಸಲಾಗುತ್ತಿದೆ ಎನ್ನುತ್ತಾರೆ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ಪಂಜಿಗ. ಒಂದು ಕಡೆ ಜಾತ್ರೋತ್ಸವಕ್ಕೆ ಬರುವ ಭಕ್ತಾಧಿಗಳು ಕೇವಲ ಕೇಸರಿ ಧ್ವಜ ಅಳವಡಿಸಿರುವ ಆಟೋಗಳನ್ನೇ ಬಳಸಬೇಕೆಂದು ಮನವಿ ಮಾಡಿರುವ ಹಿಂದೂ ಸಂಘಟನೆಗಳು ಇದೀಗ ಮಲ್ಲಿಗೆಯನ್ನೂ ಹಿಂದೂ ವ್ಯಾಪಾರಿಗಳಿಂದಲೇ ಖರೀದಿಸಬೇಕು ಎನ್ನುವ ಮನವಿ ಮಾಡಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು