ಬೆಳ್ತಂಗಡಿ: ಅಪಘಾನಿಸ್ತಾನದಲ್ಲಿ ನಡೆಯುತ್ತಿರುವ ಕ್ರೂರ ಚಟುವಟಿಕೆಗಳ ಅನಾವರಣ ಜಗತ್ತನ್ನೇ ತಲ್ಲಣಗೊಳಿಸಿದೆ. ಇಂತಹ ಚಟುವಟಿಕೆಗಳನ್ನು ತಡೆಯಲು ಸಮಾಜದ ಒಗ್ಗಟ್ಟು ಅತಿಮುಖ್ಯ ಎಂದು ರಾಜ್ಯ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಭಾನುವಾರ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡು ಪಾದ ಪೂಜೆ ನೆರವೇರಿಸಿದರು.ಹಿಂದೂ ಸಮಾಜದಲ್ಲಿ ಸ್ವಾಮೀಜಿಗಳ ಪರಂಪರೆ ನಿತ್ಯನಿರಂತರ. ಮಠಾಧೀಶರುಗಳ ಮಾರ್ಗದರ್ಶನ ಸಮಾಜಕ್ಕೆ ದೊರೆತರೆ ಉನ್ನತಿಗೆ ಕಾರಣವಾಗುತ್ತದೆ. ಚಾತುರ್ಮಾಸ್ಯದಿಂದ ಸ್ವಾಮೀಜಿಗಳು ಗಳಿಸುವ ವಿಶೇಷ ಶಕ್ತಿಯು ಸಮಾಜದ ಉದ್ಧಾರಕ್ಕೆ ಪೂರಕವಾಗುತ್ತದೆ. ಹಿಂದೂಗಳಿಗೆ ಬದುಕು ನೀಡುವ ರಾಷ್ಟ್ರವಾದ ಭಾರತದಲ್ಲಿ ಹಿಂದೂ ಸಮಾಜ ಜಾಗೃತಗೊಳ್ಳುವ ಅಗತ್ಯವಿದೆ.ನಮ್ಮಲ್ಲಿ ಹಿಂದೂ ಸಮಾಜ ಇನ್ನಷ್ಟು ಗಟ್ಟಿಗೊಳ್ಳಬೇಕು ನಾವು ಒಗ್ಗಟ್ಟಾಗಿ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಅನ್ನ ಛತ್ರ, ವಸತಿಗೃಹ, ಧ್ಯಾನ ಮಂದಿರ ನಿರ್ಮಾಣಕ್ಕೆ ಈಗಾಗಲೇ ಶಿಲಾನ್ಯಾಸ ನೆರವೇರಿದೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆ ಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂಧನ ಸಚಿವರ ನೇತೃತ್ವದಲ್ಲಿ ಇನ್ನಷ್ಟು ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ನಮ್ಮ ಧರ್ಮವನ್ನು ಅನುಸರಿಸಿ ನಡೆದರೆ ಅದು ನಮ್ಮನ್ನು ರಕ್ಷಿಸುತ್ತದೆ,ಧರ್ಮವು ಪೂರ್ಣರೂಪದಲ್ಲಿ ಪದರವಾಗಿ ನಮ್ಮನ್ನು ಸೇರಿದರೆ ಸಮಾಜಮುಖಿ ಕಾರ್ಯಗಳು ನೆರವೇರುತ್ತವೆ. ನಿವೇದನೆ ಮಾನವನ ಕರ್ತವ್ಯವಾಗಿದ್ದು ನಿರೀಕ್ಷೆಗಳು ಈಡೇರಿದಾಗ ಶ್ರದ್ಧೆಯಿಂದಯಿಂದ ಪ್ರಯತ್ನ ಮುಂದುವರಿಸಬೇಕು. ಆಗ ಕೆಲಸಗಳು ಕೈಗೂಡುತ್ತವೆ.ಉನ್ನತ ವ್ಯಕ್ತಿಗಳು ಆಚಾರ-ವಿಚಾರ, ಸರಳತೆ,ಶ್ರದ್ಧೆಯನ್ನು ಪಾಲಿಸಿದರೆ ಅದು ಪರಂಪರೆಯಾಗಿ ಮುಂದುವರೆದು ಇತರರಿಗೂ ದಾರಿದೀಪವಾಗುತ್ತದೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕ್ಷೇತ್ರದ ವತಿಯಿಂದ ಸುನಿಲ್ ಕುಮಾರ್ ಪ್ರಿಯಾಂಕಾ ದಂಪತಿಯನ್ನು ಗೌರವಿಸಲಾಯಿತು. ಎಸ್ ಸಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಕೋಟ್ಯಾನ್, ಎಸ್. ಕೆ.ಸಾಲಿಯಾನ್ ಉದಯ ಕೋಟ್ಯಾನ್, ದಿವ್ಯಾ ಗಿರೀಶ ಅಮೀನ್,ಜಯರಾಮ ಸಾಲಿಯಾನ್,ರತ್ನಾಕರ ಸಾಲಿಯಾನ್,ಗಿರೀಶ್ ಅಮೀನ್, ರಮೇಶ್ ಕುಮಾರ್,ಜಯಂತ ಕೋಟ್ಯಾನ್, ಶ್ರೀನಿವಾಸ ರಾವ್ ಮತ್ತಿತರರು ಉಪಸ್ಥಿತರಿದ್ದರು.