ಕಾಸರಗೋಡು: ಕನ್ನಡ ತಿಳಿಯದ ಶಿಕ್ಷಕರನ್ನು ಭೌತಶಾಸ್ತ್ರ ಕಲಿಸಲು ನೇಮಿಸಿದ ಕ್ರಮವನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ ಘಟನೆ ಆದೂರು ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ ನಡೆದಿದೆ.
ಈ ಶಿಕ್ಷಕರು 2019ರಲ್ಲಿ ಪೈವಳಿಕೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇರ್ಪಡೆಯಾಗಿದ್ದರು. ನಂತರ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ರಜೆಯಲ್ಲಿ ತೆರಳಿದ್ದರು. ಇನ್ಸ್ಟಿಟ್ಯೂಟ್ ಅಫ್ ಇಂಡಿಯನ್ ಲಾಂಗ್ವಿಜಸ್ ಸಂಸ್ಥೆಗೆ 10 ತಿಂಗಳ ತರಬೇತಿಗೆ ತೆರಳಿದ್ದರು. ಇದೀಗ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಆದೇಶದಂತೆ ಆದೂರು ಶಾಲೆಗೆ ಮಂಗಳವಾರ ಸೇರ್ಪಡೆಗೊಂಡಿದ್ದರು. ಕನ್ನಡ ಬಾರದ ಶಿಕ್ಷಕರ ತರಗತಿಯು ಅರ್ಥವಾಗುತ್ತಿಲ್ಲ’ ಎಂದು ದೂರಿದ ಕನ್ನಡ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ಮನವಿ ನೀಡಿದರು.
ಶಿಕ್ಷಕರನ್ನು ವರ್ಗಾಯಿಸದೇ ಇದ್ದಲ್ಲಿ ಹೋರಾಟ ಮುಂದುವರಿಸಲು ಕನ್ನಡ ವಿದ್ಯಾರ್ಥಿಗಳು ತೀರ್ಮಾನಿಸಿದ್ದಾರೆ. ಕಾಸರಗೋಡು ಜಿಲ್ಲಾಶಿಕ್ಷಣ ಉಪ ನಿರ್ದೇಶಕರ ಆದೇಶದಂತೆ ಕನ್ನಡ ತಿಳಿಯದ ಅಧ್ಯಾಪಕನನ್ನು ಆದೂರು ಪ್ರೌಢಶಾಲೆಗೆ ವರ್ಗಾವಣೆಗೊಳಿಸಲಾಗಿದ್ದು, ಮಂಗಳವಾರ ಆದೂರು ಶಾಲೆಗೆ ಆಗಮಿಸಿದ್ದಾರೆ. 2019ರ ಜ.14ರಂದು ಜಿಎಚ್ಎಸ್ಎಸ್ ಪೈವಳಿಕೆಯಲ್ಲಿ ಪ್ರಥಮ ಬಾರಿಗೆ ಫಿಸಿಕಲ್ ಸೈನ್ಸ್(ಕನ್ನಡ ಮಾಧ್ಯಮ) ಶಿಕ್ಷಕರಾಗಿ ಸೇರ್ಪಡೆಗೊಂಡಿದ್ದರು. ಆದರೆ ಕನ್ನಡ ಭಾಷಾ ಪ್ರಾವೀಣ್ಯತೆ ಇಲ್ಲದ ಕಾರಣ ಊರವರ ಮತ್ತು ಪೋಷಕರ ಪ್ರತಿಭಟನೆಯ ಫಲವಾಗಿ ಒಂದು ವಾರದ ನಂತರ 6 ತಿಂಗಳ ಕಾಲ ವೇತನವಿಲ್ಲದ ರಜೆಯ ಮೇಲೆ ತೆರಳಲು ಆದೇಶ ನೀಡಲಾಯಿತು.
ಇದೇ ಸಂದರ್ಭ ಕೋರ್ಟ್ ಆದೇಶದಂತೆ ಇವರು ಕನ್ನಡ ಭಾಷಾ ಪ್ರಾವೀಣ್ಯತೆಯನ್ನು ಪಡೆಯುವುದಕ್ಕಾಗಿ ಮೈಸೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಹತ್ತು ತಿಂಗಳ ತರಬೇತಿಗೆ ತೆರಳಿ ದ್ದರು. ಆ ಪ್ರಕಾರ ತರಬೇತಿ ಪಡೆದ ಇವರು ಪುನಃ ಈ ಹುದ್ದೆಗೆ ಮರು ಸೇರ್ಪಡೆಗೆ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಆದೂರು ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ಧೆಗೆ ಈಗ ಪುನಃ ಸೇರ್ಪಡೆಗೊಂಡಿದ್ದಾರೆ.
ಆದರೆ ಈ ಶಿಕ್ಷಕರ ಬೋಧನೆ ವಿದ್ಯಾರ್ಥಿಗಳಿಗೆ ಅರ್ಥೈಸಿಕೊಳ್ಳಲು ಅಸಾಧ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ಮನವಿ ನೀಡಿದ್ದು, ಈ ಶಿಕ್ಷಕರನ್ನು ವರ್ಗಾಯಿಸುವವರೆಗೆ ತರಗತಿ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಪೋಷಕರು ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕೃತರನ್ನು ಒತ್ತಾಯಿಸಿದ್ದಾರೆ.