ಕಾಸರಗೋಡು: ಉದುಮ ಆಯಂಪಾರದ ಝುಬೈದಾ ( 60) ಎಂಬ ಮಹಿಳೆಯ ಕತ್ತು ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಥಮ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧವಾರ ತೀರ್ಫು ನೀಡಿದೆ. ಕೊಲೆ, ಅಕ್ರಮವಾಗಿ ಮನೆಗೆ ಪ್ರವೇಶ, ದರೋಡೆ ಪ್ರಕರಣಗಳನ್ನು ಆರೋಪಿ ವಿರುದ್ಧ ಹೂಡಲಾಗಿದೆ. ಒಂದೂವರೆ ಲಕ್ಷ ರೂ. ದಂಡ ವಿಧಿಸಿದೆ.
ವಿದ್ಯಾನಗರ ಕುಂಜಾರು ಕೋಟೆಕಣಿಯ ಅಬ್ದುಲ್ ಖಾದರ್ (32) ಶಿಕ್ಷೆ ಗೊಳಗಾದವನು ಮೂರನೇ ಆರೋಪಿ ಮಾನ್ಯದ ಅರ್ಷಾದ್( 28) ನನ್ನು ಖುಲಾಸೆಗೊಳಿಸಿದೆ.
ಇನ್ನೋರ್ವ ಆರೋಪಿ ಸುಳ್ಯ ಅಜ್ಜಾವರದ ಅಬ್ದುಲ್ ಅಝೀಜ್ ( 36) ತಲೆ ಮರೆಸಿಕೊಂಡಿದ್ದಾನೆ. ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಅಝೀಜ್ ನನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಸ್ಟಡಿಗೆ ಪಡೆದಿದ್ದ 2018 ರ ಸೆ. 14 ರಂದು ಸುಳ್ಯ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಬರುತ್ತಿದ್ದಾಗ ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ ಪರಿಸರದಿಂದ ತಪ್ಪಿಸಿ ಪರಾರಿಯಾಗಿದ್ದನು. ಈತ ಈಗಲೂ ತಲೆ ಮರೆಸಿಕೊಂಡಿದ್ದಾನೆ.
2018 ರ ಜನವರಿ 17 ರಂದು ಕೃತ್ಯ ನಡೆದಿತ್ತು. ಸ್ಥಳ ನೋಡಲು ಎಂದು ಹೇಳಿ ಬಂದಿದ್ದ ಇವರು ಝುಬೈದಾರ ಮನೆಗೆ ಬಂದಿದ್ದು, ಕುಡಿಯಲು ನೀರು ಕೇಳಿದ್ದರು.ಝುಬೈದಾ ಒಳಗಡೆ ನೀರು ತರಲು ತೆರಳುತ್ತಿದ್ದಂತೆ ಹಿಂಬಾಲಿಸಿದ ತಂಡವು ಕತ್ತು ಹಿಸುಕಿ ಕೊಲೆ ಗೈದಿದ್ದು, ಮನೆಯಲ್ಲಿದ್ದ 27 ಗ್ರಾಂ ನಷ್ಟು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈಕೆ ಏಕಾಂಗಿಯಾಗಿ ವಾಸವಾಗಿದ್ದರಿಂದ ಮರುದಿನ ಕೃತ್ಯ ಬೆಳಕಿಗೆ ಬಂದಿತ್ತು.
ಕಳವುಗೈದ ಚಿನ್ನಾಭರಣ ವನ್ನು ಕಾಸರಗೋಡಿನ ಜುವೆಲ್ಲರಿಗೆ ಮಾರಾಟ ಮಾಡಿದ್ದು,ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಪ್ರಥಮ ಆರೋಪಿ ಅಬ್ದುಲ್ ಖಾದರ್ ಕೆಲ ಸಮಯ ಝುಬೈದಾರ ಮನೆ ಸಮೀಪ ಮನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಝುಬೈದಾರ ಚಲನ ವಲನಗಳ ಬಗ್ಗೆ ಗಮನಿಸಿದ್ದು, ಇದರಿಂದ ಈಕೆ ಬಳಿ ಭಾರೀ ಮೌಲ್ಯದ ಚಿನ್ನಾಭರಣ ಹಾಗೂ ಹಣ ಇರಬಹುದು ಎಂಬ ಸಂಶಯದಿಂದ ಈ ಕೃತ್ಯ ನಡೆಸಿದ್ದರು ಎಂದು ಪೊಲೀಸ್ ತನಿಖೆ ಯಿಂದ ತಿಳಿದುಬಂದಿತ್ತು.