ಕಾಸರಗೋಡು: ಸಾಮಾಗ್ರಿ ಖರೀದಿಸಲೆಂದು ಮನೆಯಿಂದ ಅಂಗಡಿಗೆ ತೆರಳಿದ್ದ ಕೂಲಿ ಕಾರ್ಮಿಕರೋರ್ವರು ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರ್ಕಾಡಿ ಸಮೀಪ ನಡೆದಿದೆ. ವರ್ಕಾಡಿ ಆನೆಕಲ್ ನ ಬಾಲಕೃಷ್ಣ ನಾಯ್ಕ್ (39) ಮೃತಪಟ್ಟವರು. ಕೂಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಬಾಲಕೃಷ್ಣರವರು ಶುಕ್ರವಾರ ರಾತ್ರಿ ಅಂಗಡಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು.
ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಸಂಬಂಧಿಕರು ಶೋಧ ನಡೆಸಿದ್ದರು. ಈ ನಡುವೆ ಆನೆಕಲ್ಲು ಎಂಬಲ್ಲಿ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಹಾಗೂ ನಾಗರಿಕರು ಮೃತ ದೇಹವನ್ನು ಮೇಲಕ್ಕೆತ್ತಿದರು. ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು. ಮಂಜೇಶ್ವರ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.