ಕಾಸರಗೋಡು :ತೋಟದಲ್ಲಿ ಹೂತು ಹಾಕಲಾಗಿದ್ದ ಜಾರ್ಖಂಡ್ ಮೂಲದ ಕಾರ್ಮಿಕನ ಮೃತದೇಹವನ್ನು ರವಿವಾರ ಹೊರ ತೆಗೆದು ಸ್ಥಳದಲ್ಲೇ ಮಹಜರು ನಡೆಸಲಾಯಿತು.
ಮಂಜೇಶ್ವರ ಠಾಣಾ ವ್ಯಾಪ್ತಿಯ ಕನಿಯಾಲ ಸುದೆಂಬಳದ ಕೃಷಿಕ ರೋರ್ವರ ತೋಟದಲ್ಲಿ ಮೃತದೇಹವನ್ನು ಹೂತು ಹಾಕಲಾಗಿತ್ತು. ಮಧ್ಯಾಹ್ನದ ವೇಳೆಗೆ ಫಾರೆನ್ಸಿಕ್ ತಜ್ಞರು , ಪೊಲೀಸ್ ಸರ್ಜನ್ ರ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದರು.
ಪೊಲೀಸರ ಮನವಿಯಂತೆ ಆರ್ ಡಿ ಒ ಶನಿವಾರ ರಾತ್ರಿ ಅನುಮತಿ ನೀಡಿದ್ದು , ಇದರಂತೆ ರವಿವಾರ ಮ್ರತದೇಹವನ್ನು ಹೊಂಡ ಅಗೆದು ಹೊರ ತೆಗೆಯಲಾಯಿತು.
ತೋಟದ ಕೆರೆಯ ಬದಿಯಲ್ಲಿ ಮೃತದೇಹ ಹೂತು ಹಾಕಿ ಅದರ ಮೇಲೆ ತೆಂಗಿನ ಸಸಿಯನ್ನು ನೆಡಲಾಗಿತ್ತು . ಮ್ರತಪಟ್ಟ ಶಿವಾನಂದ್ ಯಾನೆ ಶಿವಾಜ್ ( ೩೫) ಜೊತೆಗಿದ್ದ ಕಾರ್ಮಿಕರು ಮೃತದೇಹವನ್ನು ಹೊರತೆಗೆಯಲು ನೆರವಾದರು. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿವಾಜ್ ನ ನಿಗೂಢ ಸಾವು ಹಾಗೂ ಹೂತು ಹಾಕಿದ ಘಟನೆಗೆ ಸಂಬಂಧಪಟ್ಟಂತೆ ಮನೆ ಮಾಲಕ ಹಾಗೂ ಕಾರ್ಮಿಕರು ಸೇರಿದಂತೆ ಹತ್ತು ಮಂದಿಯಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಮೃತದೇಹದ ಫಾರೆನ್ಸಿಕ್ ಹಾಗೂ ಪರೀಕ್ಷಾ ವರದಿ ಲಭಿಸಿದ ಬಳಿಕ ಸಾವಿಗೆ ಮುಂದಿನ ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.