ಬಂಟ್ವಾಳ: ಪಂಜಿಕಲ್ಲು ಬಸದಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಹಿನ್ನೆಲೆಯಲ್ಲಿ ಭಾನುವಾರ ಭಗವಾನ್ ಶ್ರೀ ಆದಿನಾಥ ಸ್ವಾಮಿಗೆ 504 ಕಲಶಾಭಿಷೇಕ ಮಹೋತ್ಸವ ಸಹಿತ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಬೆಳಗ್ಗೆ ಸಾಮೂಹಿಕ ವೃತೋಪದೇಶ, ಗಣಧರವಲಯ ಆರಾಧನಾ ವಿಧಾನ, ಯಾಗಮಂಡಲಾರಾಧನೆ, ರಾಜ್ಯಭಾರ, ರಾಜವೈಭವ, ಪರಿನಿಷ್ಕ್ರಮಣ ಕಲ್ಯಾಣ, ದೀಕ್ಷಾ ವಿಧಿ ನೆರವೇರಿತು. ಸಂಜೆ ಅಗ್ರೋದಕ ಮೆರವಣಿಗೆ ಬಳಿಕ ಧಾರ್ಮಿಕ ಸಭೆ ಪರಮಪೂಜ್ಯ 108 ಅಮೋಘಕೀರ್ತಿ ಮುನಿ ಮಹಾರಾಜರು, ಅಮರಕೀರ್ತಿ ಮುನಿ ಮಹಾರಾಜರ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ರಾಜ್ಯಭಾರ ರಾಜವೈಭವ, ಪರಿನಿಷ್ಕ್ರಮಣ ಕಲ್ಯಾಣ, ಅಜೇಯ ಬಾಹುಬಲಿ, ಸಮವಸರಣ ವೈಭವ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ನಿರೀಕ್ಷಾ ಜೈನ್ ಅವರಿಂದ ಸಂಗೀತ ಪೂಜಾಷ್ಟಕ ನೆರವೇರಿತು.
ಪಂಜಿಕಲ್ಲು ಬಸದಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಪಂಜಿಕಲ್ಲಿಗೆ ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಜೀರ್ಣೋದ್ಧಾರ ಮತ್ತು ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ತಿಳಿಸಿದ್ದಾರೆ.