ಕಾರವಾರ:ಎಡ ಪಂಥೀಯರನ್ನು ಓಲೈಸುವ ಸಲುವಾಗಿ ರಾಜ್ಯ ಸರ್ಕಾರ ಈಗ ಶಾಲಾ ಪಠ್ಯ ಬದಲಿಸಲು ಹೊರಟಿರುವದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಶಿರಸಿಯಲ್ಲಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುಲಾಮಿತನದ ಮಾನಸಿಕತೆಯನ್ನು ಮಕ್ಕಳ ಮೇಲೆ ಹೇರಲು ಯಾವ ಕಾರಣಕ್ಕೂ ಮುಂದಾಗಬಾರದೆಂದು ಶಿರಸಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅಸಮಧಾನ ಹೊರಹಾಕಿದ ಅವರು, ಈಗಾಗಲೇ ಶಾಲೆಗಳಿಗೆ ಪುಸ್ತಕ ವಿತರಣೆ ಆಗಿದೆ. ಶಾಲೆಗಳು ಆರಂಭಗೊಂಡಿವೆ. ಅನಗತ್ಯವಾಗಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದೆ. ದೇಶದ ನೈಜ ಸ್ಥಿತಿ ತಿಳಿಸುವ ಪಠ್ಯಗಳನ್ನು ತೆಗೆಯಲು ಕಾಂಗ್ರೆಸ್ ಯೋಚಿಸುತ್ತಿದೆ. ಸಿದ್ದರಾಮಯ್ಯ ಎಡ ಪಂಥೀಯ ವಿಚಾರ ಧಾರೆಯ ಕೈಗೊಂಬೆ ಆಗಿ ವರ್ತಿಸುತ್ತಿದ್ದಾರೆ. ಇದರ ಪರಿಣಾಮ ಪಠ್ಯ ಬದಲಾವಣೆಯ ತರಾತುರಿ ಕಾಣಿಸುತ್ತಿದೆ.
ಈಗ ಶೈಕ್ಷಣಿಕ ವರ್ಷ ಆರಂಭ ಆಗಿ ಪುಸ್ತಕ ಪೂರೈಕೆ ಆದ ಮೇಲೆ ವಿದ್ಯಾರ್ಥಿಗಳಿಗೆ ಗೊಂದಲ ಮಾಡಬೇಡಿ. ಎಡಪಂಥೀಯರ ಓಲೈಕೆಗೆ ಶಿಕ್ಷಣ ಕ್ಷೇತ್ರಕ್ಕೆ ತೊಂದರೆ ಮಾಡಬೇಡಿ ಎಂದರು. ಪಠ್ಯ ಬದಲಾವಣೆಗೂ ಇತಿ ಮಿತಿಗಳಿವೆ. ವಿವಿಧ ಹಂತದ ಚರ್ಚೆ ನಡೆದು ಬದಲಾವಣೆ ಮಾಡುವ ಪದ್ಧತಿ ಇದೆ. ಈ ಹಿಂದೆ 2013ರಲ್ಲಿ ಸಹ ಸಿದ್ದರಾಮಯ್ಯ ಇದೇ ರೀತಿ ವರ್ತಿಸಿ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರಾಷ್ಟ್ರೀಯತೆ ವಿಚಾರ ಬದಿಗಿಟ್ಠು ಪಠ್ಯ ರಚನೆಗೆ ಮುಂದಾಗಿತ್ತು. ಪಠ್ಯದಲ್ಲಿ ತಪ್ಪಿಲ್ಲದಿದ್ದರೂ ಕೆಲವರು ಬರೆದಿದ್ದಾರೆ ಎಂಬ ಕಾರಣಕ್ಕೆ ಬದಲಾಗಿಸುತ್ತಿದ್ದಾರೆ. ಇತಿಹಾಸಕ್ಕೆ ಹತ್ತಾರು ಮುಖಗಳಿವೆ.
ಭಾರತೀಯ ದೃಷ್ಟಿಕೋನದ ಇತಿಹಾಸವನ್ನು ನಾವು ಮಕ್ಕಳಿಗೆ ನೀಡಬೇಕೇ ಹೊರತೂ ಬ್ರಿಟೀಷರ ಅಥವಾ ಮುಘಲರ ದೃಷ್ಟಿಕೋನದಿಂದ ಮಕ್ಕಳಿಗೆ ನೀಡಬಾರದು. ಗುಲಾಮಿತನದ ಮಾನಸಿಕತೆಯ ಶಿಕ್ಷಣಕ್ಕೆ ಮತ್ತೆ ಸಿದ್ರಾಮಯ್ಯ ಮುಂದಾಗಿದ್ದಾರೆ. ಈ ರೀತಿ ಗೊಂದಲ ಮಾಡಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಎಡಪಂಥೀಯರ ಓಲೈಕೆಗೆ ಮಾಡುತ್ತಿರುವ ಯತ್ನ ಖಂಡನಾರ್ಹ ಎಂದರು.