ಮೂಡುಬಿದಿರೆ: ಬೈಕಂಪಾಡಿಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೋರ್ವರಿಗೆ ಹುಡುಗಿಯ ಸ್ವರದಲ್ಲಿ ಕಾಲ್ ಮಾಡಿ ಉಷಾ ಎಂದು ಪರಿಚಯಿಸಿಕೊಂಡು ಸಲುಗೆಯಿಂದ ಮಾತನಾಡಿ ವೀಡಿಯೋ ಕಾಲ್ ಮಾಡಿ ಯುವತಿಯ ಖಾಸಗಿ ಅಂಗಗಳನ್ನು ತೋರಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪದಲ್ಲಿ ಮೂಡುಬಿದಿರೆ ಸಮೀಪದ ಯುವಕನೋರ್ವನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.
ಅಂದಹಾಗೆ ಈ ‘ಉಷಾ’ ನ ಅಸಲಿ ಹೆಸರು ಧನಂಜಯ. ಮೂಡುಬಿದಿರೆ ಸಮೀಪದ ಬಿರಾವು ಪರಿಸರದವನು.
ಬೈಕಂಪಾಡಿಯಲ್ಲಿ ಉದ್ಯೋಗಿಯಾಗಿರುವ ಸುರತ್ಕಲ್ ಹೊಸಬೆಟ್ಟು ನಿವಾಸಿ ನವೀನ್ ಚಂದ್ರ ಎಂಬುವರಿಗೆ ಒಂದು ಮೊಬೈಲ್ ನಂಬರ್ ನಿಂದ ಕಾಲ್ ಬರುತ್ತದೆ. ಕಾಲ್ ಮಾಡಿದ ಧನಂಜಯ ಹುಡುಗಿಯ ಸ್ವರದಲ್ಲಿ ಮಾತನಾಡುತ್ತಾ ತನ್ನನ್ನು ಉಷಾ ಎಂದು ಪರಿಚಯಿಸಿಕೊಳ್ಳುತ್ತಾನೆ. ಹೀಗೆಯೇ ಮೊಬೈಲ್ ನಲ್ಲಿ ಮಾತನಾಡುತ್ತಾ ಸಲುಗೆಗೆ ಹೋಗಿ ಒಂದು ದಿನ ವೀಡಿಯೋ ಕಾಲ್ ನಲ್ಲಿ ಮಾತನಾಡುವ ಎಂದು ವೀಡಿಯೋ ಕಾಲ್ ಮಾಡಿ ಅದರಲ್ಲಿ ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಇಬ್ಬರೂ ಮಾತನಾಡುವ ಸ್ಕ್ರೀನ್ ಶಾಟ್ ತೆಗೆದು ಕೆಲ ದಿನಗಳ ಬಳಿಕ ಅದನ್ನು ನವೀನ ಚಂದ್ರರಿಗೆ ಕಳುಹಿಸಿ ನನಗೆ 25 ಸಾವಿರ ಹಣ ಕೊಡಬೇಕು,ಇಲ್ಲವಾದಲ್ಲಿ ಈ ವೀಡಿಯೋ ಕ್ಲಿಪ್ಪಿಂಗನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ.
ಇದರಿಂದ ಗಾಬರಿಗೊಂಡ ನವೀನ್ ಚಂದ್ರ ಅವರು ಒಮ್ಮೆ ಎರಡು ಸಾವಿರ ಗೂಗಲ್ ಪೇ ಮಾಡಿದ್ದಾರೆ. ಮತ್ತೆ ಕೆಲದಿನಗಳ ಬಳಿಕ ಕಾಲ್ ಮಾಡಿ ಮತ್ತೊಮ್ಮೆ 25 ಸಾವಿರಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ವೇಳೆಗಾಗಲೇ ನವೀನರಿಗೆ ತನಗೆ ಕಾಲ್ ಮಾಡುತ್ತಿರುವುದು ಉಷಾ ಅಲ್ಲ ಎಂಬ ವಿಷಯ ಅರಿವಿಗೆ ಬಂದಿದೆ.
ಈ ವಿಷಯವನ್ನು ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಅವರು ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದು ಅದರಂತೆ ನವೀನ್ ಚಂದ್ರ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಧನಂಜಯನನ್ನು ಇತ್ತೀಚೆಗೆ ಮೂಡುಬಿದಿರೆಯಿಂದ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಧನಂಜಯ ನ್ಯಾಯಾಂಗ ಬಂಧನದಲ್ಲಿದ್ದು ಗುರುವಾರ ಸಂಜೆ ಆತನಿಗೆ ಜಾಮೀನು ದೊರಕಿದೆ.