ಕಾವು: 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾವು ನಿವಾಸಿಯೋರ್ವರ ಮೃತದೇಹವು ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ಮಾಡ್ನೂರು ಗ್ರಾಮದ ಚಾಕೋಟೆ ಕಾಡಿನಲ್ಲಿ ಪತ್ತೆಯಾದ ಘಟನೆ ಜ.13ರಂದು ವರದಿಯಾಗಿದೆ.
ಮಾಡ್ನೂರು ಗ್ರಾಮದ ಕಾವು ಪೂವಂದೂರು ನಿವಾಸಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಮುದ್ದ (54)ಅವರು ಎಂದು ಗುರುತಿಸಲಾಗಿದ್ದು, ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಾಡ್ನೂರು ಗ್ರಾಮದ ಕಾವು ಚಾಕೋಟೆ ಕಾಡಿನಲ್ಲಿ ಪತ್ತೆಯಾಗಿದೆ. ಜ.5ರಂದು ಮುದ್ದ ಅವರು ನಾಪತ್ತೆಯಾಗಿದ್ದರು. ಜ.4ರಂದು ರಾತ್ರಿ ಮನೆಯಿಂದ ಬೆಳ್ಳಾರೆಯ ಮಗಳ ಮನೆಗೆ ಹೋದವರು ಜ.5ರಂದು ಅಲ್ಲಿಂದ ಮರಳಿದ ಅವರು ಕಾವು ಜಂಕ್ಷನ್ನಲ್ಲಿ ಇದ್ದರೆನ್ನಲಾಗಿದೆ. ಸಂಜೆ ವೇಳೆಯಾದರೂ ಮನೆಗೆ ತಲುಪದ ಹಿನ್ನೆಲೆಯಲ್ಲಿ ಮುದ್ದ ಅವರ ಮನೆಮಂದಿ ಸ್ಥಳೀಯವಾಗಿ ಹುಡುಕಾಡಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈ ಕುರಿತು ಪೊಲೀಸರು ಕೇಸು ದಾಖಲಿಕೊಂಡಿರಲಿಲ್ಲ. ಮುದ್ದ ಅವರ ಮನೆಯವರು ಸೇರಿದಂತೆ ಸಂಬಂಧಿಕರು ಕೂಡ ಹುಡುಕಾಟ ಆರಂಭಿಸಿದ್ದರು. ನಾಪತ್ತೆಯಾಗಿ ಒಂದು ವಾರವಾಗುತ್ತ ಬಂದರೂ ನಾಪತ್ತೆಯಾದವರ ಸುಳಿವು ಪತ್ತೆಯಾಗಿರಲಿಲ್ಲ.
ಕಾಡಿನಲ್ಲಿ ಮೃತದೇಹ ಪತ್ತೆ
ನಾಪತ್ತೆಯಾಗಿದ್ದ ಮುದ್ದರವರ ಮೃತದೇಹವು ಮಾಡ್ನೂರು ಗ್ರಾಮದ ಕಾವು ಚಾಕೋಟೆ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುದ್ದರವರ ಮನೆಯವರು, ಸಂಬಂಧಿಕರು ಜ.13ರಂದು ಬೆಳಗ್ಗೆ ಹುಡುಕಾಟ ಮಾಡುತ್ತಿದ್ದ ಸಂದರ್ಭದಲ್ಲಿ ಚಾಕೋಟೆ ಸಮೀಪದ ಕಾಡಿನಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಏನೆಂಬುದಾಗಿ ತಿಳಿಯಲು ಮುಂದೆ ಸಾಗಿದಾಗ ಕಾಡಿನಲ್ಲಿ ಮರವೊಂದರಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಯಿತು. ಇದೇ ಕಾಡಿನಲ್ಲಿ ಈ ಮೊದಲು ಕೂಡಾ ಹುಡುಕಾಟ ನಡೆಸಲಾಗಿತ್ತಾದರೂ ಆಗ ಈ ಕುರಿತು ಸುಳಿವು ಸಿಗಲಿಲ್ಲ.