ಪುತ್ತೂರು: ವಿದ್ಯುತ್ ದುರಸ್ಥಿ ಮಾಡಿದ ಬಳಿಕ ವಿದ್ಯುತ್ ಪೂರೈಕೆ ಮಾಡಲು ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದ ಪವರ್ ಮೆನ್ ಒಬ್ಬರ ಮೇಲೆ ಆಕಸ್ಮಿಕವಾಗಿ ವಿದ್ಯುತ್ ಹರಿದು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಜೂ.12 ರಂದು ಉಪ್ಪಿನಂಗಡಿ ಸಮೀಪದ 34 ನೆಕ್ಕಿಲಾಡಿಯಲ್ಲಿ ನಡೆದಿದೆ.
ಮೂಲತಃ ದಾವಣಗೆರೆ ನಿವಾಸಿ ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಪವರ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಿಟ್ಯಾ ನಾಯಕ್(35ವ) ರವರು ಮೃತ ಪಟ್ಟವರು. ಅವರು ಸವಣೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ಯವ್ಯ ಹೊಂದಿದ್ದು, ಉಪ್ಪಿನಂಗಡಿ ಮೆಸ್ಕಾಂ ಶಾಖೆಗೆ ನಿತ್ಯ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಜೂ. 12 ರಂದು ಮೈನ್ ಲೈನ್ ದುರಸ್ಥಿಯ ಹಿನ್ನಲೆಯಲ್ಲಿ ಬೇರಿಕೆಯ ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಲಾಗಿತ್ತು. ದುರಸ್ಥಿಯ ಬಳಿಕ ಲೈನ್ ಚಾರ್ಜ್ ಮಾಡಲು ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದಂತೆ ಪವರ್ ಮೆನ್ ಮಿಟ್ಯಾ ನಾಯಕ್ ಅವರ ಮೇಲೆ ವಿದ್ಯುತ್ ಹರಿದು ಅಲ್ಲೆ ಕುಸಿದು ಅಸ್ವಸ್ತಗೊಂಡರು. ಇದೆ ಸಂದರ್ಭದಲ್ಲಿ ಮಿಟ್ಯಾ ನಾಯಕ್ ಜೊತೆ ಇದ್ದ ಸಹದ್ಯೋಗಿ ಸಾಬಣ್ಣ ಎಂಬವರು ಬೊಬ್ಬೆಹೊಡೆದಾಗ ಸ್ಥಳೀಯರು ಸೇರಿ ಕೊಂಡು ಅಸ್ವಸ್ಥಗೊಂಡ ಮಿಟ್ಯಾ ನಾಯಕ್ ಅವರನ್ನು ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ 208 ಆ್ಯಂಬುಲೆನ್ಸ್ ಮೂಲಕ ಕರೆತಂದರು. ಆದರೆ ಗಂಭೀರ ಗಾಯಗೊಂಡ ಪವರ್ ಮೆನ್ ಮಿಟ್ಯಾ ನಾಯಕ್ ಆಗಲೇ ಮೃತಪಟ್ಟಿದ್ದರು. ಮೃತರು ಪತ್ನಿ, 1 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಮೆಸ್ಕಾಂ ಇಂಜಿನಿಯರ್ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಾಮಾಣಿಕ ಪವರ್ಮೆನ್:
ಮೃತ ಮಿಟ್ಯಾ ನಾಯಕ್ ಅವರು ಆರಂಭದಲ್ಲಿ ಸವಣೂರಿನಲ್ಲಿ ಮೂರು ವರ್ಷ ಸಹಾಯಕ ಪವರ್ಮೆನ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿ ಅವರಿಗೆ ಪವರ್ಮೆನ್ ಆಗಿ ಮುಂಭಡ್ತಿಹೊಂದಿ ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದರು. ಕಳೆದ ಮೂರು ತಿಂಗಳಿನಿಂದ ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದ್ದರು. ಸವಣೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತನ್ನ ಪ್ರಾಮಾಣಿಕ ಕರ್ತವ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಸಹುದ್ಯೋಗಿ ಮಿಟ್ಯಾ ನಾಯಕ್ ಅವರ ಮೃತಪಟ್ಟ ಸುದ್ದಿ ಹಬ್ಬುತ್ತಲೆ ಇತರ ಪವರ್ಮೆನ್ಗಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.