ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತಾನು ವಾಸ್ತವ್ಯವಿದ್ದ ನರಿಮೊಗ್ರು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯದ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.24ರಂದು ನಡೆದ ಬಗ್ಗೆ ವರದಿಯಾಗಿದೆ.
ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ತಣ್ಣೀರುಹಳ್ಳಿ ನಿವಾಸಿ ಅಣ್ಣಪ್ಪ ಅವರ ಪುತ್ರಿ ಜೀವಿತಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಅವರು ನರಿಮೊಗರುವಿನಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯದಲ್ಲಿ ವಾಸ್ತವ್ಯವಿದ್ದುಕೊಂಡು ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದರು. ಜೀವಿತಾ ಬೆಳಗ್ಗೆ ಎಂದಿನಂತೆ ವಿದ್ಯಾರ್ಥಿನಿ ನಿಲಯದಿಂದ ಕಾಲೇಜಿಗೆ ಹೋಗಿದ್ದರು. ಮಧ್ಯಾಹ್ನ ವೇಳೆಗೆ ಕಾಲೇಜಿನಿಂದ ವಿದ್ಯಾರ್ಥಿನಿ ನಿಲಯಕ್ಕೆ ತೆರಳಿದ್ದ ಆಕೆ ವಿದ್ಯಾರ್ಥಿನಿ ನಿಲಯದಲ್ಲಿ ತಾನು ವಾಸ್ತವ್ಯವಿದ್ದ ಕೋಣೆಯ ಪ್ಯಾನಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಅಡುಗೆ ಸಿಬ್ಬಂದಿ ಕೋಣೆಯ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಜೀವಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಚೀಟಿಯೊಂದನ್ನು ಬರೆದಿಟ್ಟಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ?
ಜೀವಿತಾ ಅವರು ಗಣೇಶ ಹಬ್ಬದ ಸಂದರ್ಭದಲ್ಲಿ ಸರಕಾರಿ ರಜೆಯ ಅವಧಿಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ 2 ದಿನ ತರಗತಿಗೆ ಗೈರಾಗಿದ್ದರು. ಈ ಕುರಿತು ಕಾಲೇಜಿನಲ್ಲಿ ಕಾರಣ ಬರೆದುಕೊಂಡು ಬರಲು ತಿಳಿಸಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತರಗತಿಯಿಂದ ಮಧ್ಯಾಹ್ನ ವೇಳೆ ಆಕೆ ವಿದ್ಯಾರ್ಥಿನಿ ನಿಲಯಕ್ಕೆ ಹೋಗಿ ಅಲ್ಲಿ ಈ ಕೃತ್ಯ ಎಸಗಿರಬಹುದೇ ಎಂಬ ಶಂಕೆ ವ್ಯಕ್ತವಾದರೂ ಆಕೆ ಬರೆದಿಟ್ಟ ಚೀಟಿಯಲ್ಲಿ ಏನಿದೆ ಎಂಬ ಕುರಿತು ಮಾಹಿತಿ ಇನ್ನೂ ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಕಾಲೇಜಿನ ಪ್ರಾಂಶುಪಾಲರು, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತೆರಳಿ ಪರಿಶೀಲಿಸಿದ್ದಾರೆ.
ಆಕೆಯ ಹೆತ್ತವರು ಮಡಿಕೇರಿಯಿಂದ ಬರುವಿಕೆಯ ಬಳಿಕ ಮೃತ ದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಪುತ್ತೂರು ನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರು ತನಿಖೆ ನಡೆಸುತ್ತಿದ್ದಾರೆ.