ಮಂಗಳೂರು: ಖಾರ ಜಾಸ್ತಿ, ಅರೆದ ಮೇಲೆ ಮಸಾಲೆ ಕೂಡ ಜಾಸ್ತಿ. ಇದು ಈ ಮೆಣಸಿನ ಸ್ಪೆಷಾಲಿಟಿ. ಹಾಗಾಗಿ ಉಪ್ಪಿನಕಾಯಿ ತಯಾರಿಗೆ ಈ ಮೆಣಸಿಗೆ ಅತ್ಯಧಿಕ ಬೇಡಿಕೆ. 50 ವರ್ಷಗಳ ಹಿಂದೆ 200 ಎಕರೆ ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದ ಇಂತಹ ಮೆಣಸು, ಪ್ರಸ್ತುತ ಕೇವಲ ಎರಡು ಮೂರು ಎಕರೆ ಪ್ರದೇಶಕ್ಕೆ ಸೀಮಿತಗೊಂಡು ಬೆರಳೆಣಿಕೆಯ ರೈತರು ಈ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಮಂಗಳೂರು ತಾಲೂಕಿನ ಹರೇಕಳ ಎಂಬ ಪ್ರದೇಶದಲ್ಲಿ ಬೆಳೆಯಲಾಗುವ ಈ ಮೆಣಸು `ಹರೇಕಳ ಮೆಣಸು’ ಎಂದೇ ಖ್ಯಾತಿ. ತುಳುವಿನಲ್ಲಿ `ಪೆರಿಯಾಳ ಮುಂಚಿ’ ಫೇಮಸ್. ಇದೀಗ ಈ ಮೆಣಸನ್ನು ಬೆಳೆಯಲು ಮಂಗಳೂರು ರಥಬೀದಿಯ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.
ಮಂಗಳೂರು ರಥಬೀದಿ ಕಾಲೇಜಿನ ಹಸಿರು ಸೇನೆ ನೇತೃತ್ವದಲ್ಲಿ ಇತಿಹಾಸ ವಿಭಾಗ ಮುಖ್ಯಸ್ಥ ಡಾ. ನವೀನ್ ಎನ್.ಕೊಣಾಜೆ ಮತ್ತು ಹರೇಕಳದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ತ್ಯಾಗಂ ಹರೇಕಳ ಇವರ ನೇತೃತ್ವದಲ್ಲಿ ಸುಮಾರು 50 ರಷ್ಟು ವಿದ್ಯಾರ್ಥಿಗಳು ಹರೇಕಳದ ಕುತ್ತಿಮೊಗರು ಗದ್ದೆಯಲ್ಲಿ ಕೃಷಿಕ ಶೇಖರ್ ಗಟ್ಟಿ ಅವರ ಕೃಷಿ ಕಾರ್ಯಕ್ಕೆ ಸಾಥ್ ನೀಡಿದರು. ಕಾರ್ಮಿಕರ ಬವಣೆ ಹಾಗೂ ಅವರ ಸಂಬಳ ಕೊಡಲು ಅಸಾಧ್ಯವಾದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೃಷಿಕ ಶೇಖರ್ ಅವರಿಗೆ ಸಹಕರಿಸಿದರು.
ಊರಲ್ಲಿದ್ದ ಅವಿಭಕ್ತ ಕುಟುಂಬ ವ್ಯವಸ್ಥೆ ದೂರವಾದಂತೆ ಕೃಷಿಭೂಮಿ ಹಂಚಿ ಹೋಯಿತು. ಶಿಕ್ಷಿತ ಯುವಕರು ದುಡಿಮೆಗಾಗಿ ನಗರ ಸೇರಿದರು. ಕೂಲಿಯಾಳುಗಳ ಸಮಸ್ಯೆ ಎದುರಾಯಿತು. ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ರಾಸಾಯನಿಕದ ಬಳಕೆ ಹೆಚ್ಚಾಯಿತು. ಗಿಡಗಳಿಗೆ ರೋಗಬಾಧೆ ಅಧಿಕವಾಗತೊಡಗಿತು. ಮನೆಯಲ್ಲಿ ಉಪ್ಪಿನಕಾಯಿ ಮಾಡುವವರ ಸಂಖ್ಯೆಯೂ ಕ್ಷೀಣಿಸಿತು. ಹೀಗಾಗಿ ಮೆಣಸಿನ ಬೇಡಿಕೆ ಇಳಿಮುಖವಾಗತೊಡಗಿತು. ಮೆಣಸಿನ ಬದಲು ಕಬ್ಬು, ಅಡಕೆ, ಭತ್ತ ಬೆಳೆದ ಪರಿಣಾಮ ಮೆಣಸು ಅಳಿವಿನಂಚಿಗೆ ತಲುಪುವಂತಾಯಿತು.
ಪಠ್ಯದಲ್ಲಿ ಉಲ್ಲೇಖವಿತ್ತು: ಹರೇಕಳ ಮೆಣಸು ಒಂದು ಕಾಲದಲ್ಲಿ ಎಷ್ಟು ಖ್ಯಾತವಾಗಿತ್ತು ಎಂದರೆ 80ರ ದಶಕದ ಮೂರನೇ ತರಗತಿ ಪಠ್ಯದಲ್ಲಿ ಹರೇಕಳ ಮೆಣಸಿನ ಬಗ್ಗೆ ಉಲ್ಲೇಖವಿತ್ತು ಎಂಬುದಾಗಿ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪ್ರಾರಂಭವಾದ ಸಂದರ್ಭ ಹರೇಕಳ ಪ್ರದೇಶದ ಬಹುತೇಕ ಗದ್ದೆಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಸಲಾದ ಕಾರಣ ಮೆಣಸು ಕೃಷಿಗೆ ಹೊಡೆತ ಬಿದ್ದಿರಬಹುದು ಎನ್ನುತ್ತಾರೆ ಅವರು.