ಮೂಡುಬಿದಿರೆ: ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರಿಗೆ ರಕ್ಷಣೆಯೇ ಇಲ್ಲವಾಗುತ್ತದೆ ಎಂದು ಕಾಂಗ್ರೆಸಿಗರು ಬೊಬ್ಬೆ ಹೊಡೆದಿದ್ದರು. ಗುಜರಾತಿನಲ್ಲಿ ಮುಸಲ್ಮಾನರು ನೆಮ್ಮದಿಯಿಂದಿಲ್ಲವೇ? ಉತ್ತರ ಪ್ರದೇಶದಲ್ಲಿ ಛತ್ತೀಸ್ಗಡದಲ್ಲಿ ಬಿಜೆಪಿ ಆಳ್ವಿಕೆಯಿದೆ. ಅಲ್ಲಿ ಅಲ್ಪ ಸಂಖ್ಯಾತರು ಸುರಕ್ಷಿತವಾಗಿಲ್ಲವೇ? ದೇಶವನ್ನು ಗೌರವಿಸದವರ ಬಗ್ಗೆ ಮಾತ್ರ ನಮ್ಮ ವಿರೋಧವಿದೆ ಎಂದು ಸಂಸದ, ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದರು.
ಅವರು ಮೂಡುಬಿದಿರೆ ಕ್ಷೇತ್ರ ಬಿಜೆಪಿ ವತಿಯಿಂದ ಮಂಗಳೂರು ಚಲೋ ನಾಡ ಜನರ ರಕ್ಷಣೆಗಾಗಿ ಜನ ಸುರಕ್ಷಾ ಯಾತ್ರೆಯ ಅಂಗವಾಗಿ ಸೋಮವಾರ ಸಂಜೆ ಪೇಪರ್ ಮಿಲ್ ಪರಿಸರದಿಂದ ಸ್ವರಾಜ್ಯ ಮೈದಾನದವರೆಗೆ ನಡೆದ ಕಾಲು ನಡಿಗೆ ಜಾಥಾದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಏನೇ ನಡೆದರೂ ಅದು ಆರೆಸ್ಸೆಸ್, ಬಿಜೆಪಿ ಎಂದು ದೂರುವುದೇ ಕಾಂಗ್ರೆಸ್ಸಿಗರಿಗೆ ರೋಗವಾಗಿಬಿಟ್ಟಿದೆ. ಈಗ ಮೋದಿಯನ್ನೂ ದೂರಲು ಆರಂಭಿಸಿದ್ದಾರೆ ಎಂದ ಜೋಷಿ 24ಕ್ಕೂ ಮಿಕ್ಕಿದ ಹತ್ಯೆಗಳಿಗೆ ಕಾರಣರಾಗಿ ಕೊಲೆ ಭಾಗ್ಯವನ್ನು ಕರ್ನಾಟಕದ ಜನತೆಗೆ ನೀಡಿರುವ ಸಿದ್ಧರಾಮಯ್ಯ ದುಂದು ವೆಚ್ಚ, ಆಡಂಬರದಿಂದ ಸಮಾಜವಾದಿಯ ಬದಲಾಗಿ ಮಜಾವಾದಿಯಾಗಿದ್ದಾರೆ ಎಂದವರು ಟೀಕಿಸಿದರು.
ಸಿದ್ಧರಾಮಯ್ಯ ಹಿಟ್ಲರ್: ನಳಿನ್
ಮತೀಯವಾದ, ಅಲ್ಪ ಸಂಖ್ಯಾತರ ತುಷ್ಠೀಕರಣದಿಂದ ಸಿದ್ಧರಾಮಯ್ಯ ಈ ದೇಶದ ಹಿಟ್ಲರ್ ಆಗಿ ಮೂಡಿ ಬಂದಿದ್ದಾರೆ ಎಂದು ಸಂಸದ ನಳಿನ್ ಆರೋಪಿಸಿದರು. ಅಧಿಕಾರ ಸ್ವೀಕರಿಸಿದ ಒಂದು ಗಂಟೆಯೊಳಗೆ ಗೋ ಹತ್ಯಾ ನಿಷೇದ ರದ್ದುಗೊಳಿಸಿದ್ದ ಸಿದ್ಧರಾಮಯ್ಯ ಗೋ ಹಂತಕರಿಗೂ ಪರಿಹಾರ ಕೊಟ್ಟು ದಾಖಲೆ ಬರೆದಿದ್ದಾರೆ. ತುಷ್ಟೀಕರಣದ ಭಾಗ್ಯ ನೀಡಿ ಪಕ್ಷವನ್ನು ಹಿಂದೂಗಳನ್ನು ಒಡೆದು ಆಳುವ ನೀತಿ ಪಾಲಿಸಿದ್ದಾರೆ. ಕರ್ನಾಟಕ ನಂ1 ಆಗಿದ್ದರೆ ಅದು ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ಅಧಿಕಾರಿಗಳ ಆತ್ಮಹತ್ಯೆ, ಹಿಂದೂ ಕಾರ್ಯಕರ್ತರ ಮಾರಣಹೋಮದಲ್ಲಿ ಮಾತ್ರ ಎಂದವರು ಹೇಳಿದರು.
ಹಿಂದೆ ಸಾಹಿತಿಗಳಿಗೆ, ಕಲಾವಿದರಿಗೆ ರಾಜಾಶ್ರಯವಿದ್ದರೆ ಕರ್ನಾಟಕದಲ್ಲೀಗ ಮತೀಯವಾದಿಗಳಿಗೆ, ಮರಳು ಮಾಫಿಯಾದವರಿಗೆ ರಾಜಾಶ್ರಯ ದೊರೆತಿದೆ. ಸಿದ್ಧರಾಮಯ್ಯ ಸರ್ಕಾರ ಎನ್ ಕೌಂಟರ್ನಲ್ಲಿ ಸತ್ತವನಿಗೂ ಧಫನ್ಗೆ ಮುಂಚೆ ಪರಿಹಾರ ಕೊಟ್ಟು ವಿಭಜಿಸಿ ಆಳುವ ಮೂಲಕ ಕಮ್ಯುನಲ್ ಮತ್ತು ಕ್ರಿಮಿನಲ್ ಗಳ ಪರವಾಗಿ ನಿಂತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ರಾಜ್ಯ ವಿಪಕ್ಷ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲ್, ಕಸ್ತೂರಿ ಪಂಜ, ಕೆ.ಪಿ.ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್, ಸುದರ್ಶನ ಎಂ. ಸುಲೋಚನಾ ಜಿ.ಕೆ.ಭಟ್, ಶಾರದಾ ರೈ, ಬಸವರಾಜ್, ಅರುಣ್ ಜಿ. ಸತ್ಯಜಿತ್ ಸುರತ್ಕಲ್, ಬ್ರಜೇಶ್ ಚೌಟ, ಕಿಶೋರ್ ರೈ ಮತ್ತಿತರರು ಹಾಜರಿದ್ದರು.