ಬೆಳ್ತಂಗಡಿ: ಸಮುದಾಯದ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ನಿಂದಿಸಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪ್ರಕಟಿಸಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದು, ಈ ಸಂದೇಶ ಹರಿದಾಡಲು ಕಾರಣರಾದವರನ್ನು ಪತ್ತೆಹಚ್ಚಿ ಕೂಡಲೇ ಕ್ರಮ ಕೈಗೊಳ್ಳಬೇಕು. ಕ್ರೈಸ್ತ ಸಮುದಾಯಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಿರೋ ಮಲಬಾರ್ ಕೆಥೋಲಿಕ್ ಅಸೋಸಿಯೇಶನ್ ವತಿಯಿಂದ ಬೆಳ್ತಂಗಡಿ ತಹಸೀಲ್ದಾರರ ಮೂಲಕ ಸಂಬಂಧಪಟ್ಟ ಇಲಾಖೆಗೆ ಶುಕ್ರವಾರ ಮನವಿ ಸಲ್ಲಿಸಿದರು.
ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಬಿ.ಜೆ ಥೋಮಸ್ ಎಂಬ ವ್ಯಕ್ತಿ ಮಾಡಿದ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಇಡೀ ಕ್ರೈಸ್ತ ಧರ್ಮವನ್ನು ನಿಂದಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಸಂದೇಶಗಳು ಸಾಮಾಜಿಕ ತಾಲಜಾಣದಲ್ಲಿ ಟೀಂ ಬೆತ್ತಲೆ ಎಂಬ ಫೇಸ್ಬುಕ್ನಲ್ಲಿ ಪ್ರಕಟಿಸಿದ್ದು ಇದು ವಾಟ್ಸ್ ಆ್ಯಪ್ ನಲ್ಲಿಯೂ ಹರಿದಾಡುತ್ತಿದೆ. ಇದರಿಂದ ಕ್ರೈಸ್ತ ಸಮುದಾಯದ ಮಕ್ಕಳು, ಮಹಿಳೆಯರು ಎಲ್ಲರೂ ಭಯದಿಂದ ಜೀವಿಸಬೇಕಾದ ಪರಿಸ್ಥಿತಿ ಬಂದಿದ್ದು, ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಬೆಳ್ತಂಗಡಿ ತಹಶಿಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ, ವೃತ್ತ ನಿರೀಕ್ಷರರ ಮೂಲಕ ಮೂಲಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭ ಕ್ರೈಸ್ತ ಸಮುದಾಯದ ಮುಂಖಂಡರುಗಳು ಮಾತನಾಡಿ ಕ್ರೈಸ್ತರು ಶಾಂತಿಪ್ರಿಯರಾಗಿದ್ದು, ಯಾವುದೇ ಕೋಮುಗಲಭೆಗಳಲ್ಲಿ ಭಾಗವಹಿಸುವುದಿಲ್ಲ. ಅಣಿಯೂರು ಪರಿಸರದಲ್ಲಿ ಕ್ರೈಸ್ತ, ಹಿಂದೂ, ಮುಸ್ಲಿಂ ಸಮುದಾಯ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ನಮಗೆ ರಕ್ಷಣೆ ಕೊಡಿ ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ನ ನಿರ್ದೇಶಕರಾದ ಫಾ. ಬಿನೋಯಿ ಜೋಸೆಫ್, ಫಾ. ಶಾಜೀ ವೆಟ್ಟಂತಡಿಕಲ್ ಗಂಡಿಬಾಗಿಲು, ಸಂಘದ ಜಿಲ್ಲಾಧ್ಯಕ್ಷ ಜೋಸ್ ನೆಲ್ಯಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಕೆ.ಕೆ. ಸೆಬಾಸ್ಟಿಯನ್, ತಾಲೂಕು ಅಧ್ಯಕ್ಷ ಅಶ್ವಥ್ ಸೆಬಾಸ್ಟಿನ್, ಉಪಾಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ಕಾನೂನು ಸಲಹೆಗಾರರಾದ ಸೇವಿಯರ್ ಪಾಲೇಲಿ, ಪ್ರದೀಪ್ ಕೆ.ಸಿ., ಎಲ್ಲಾ ಪ್ರಾಥಮಿಕ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು.