ಮಂಗಳೂರು : ಪದೇ ಪದೇ ಮಂಗಳೂರಿನಲ್ಲಿ ನಡೆಯುತ್ತಿರುವ ಗಲಭೆ ಸಂಬಂಧ ಕಠಿಣ ಕ್ರಮ ಜರುಗಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಶೀಘ್ರದಲ್ಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇವೆ. ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಲು ಇರುವ ಕಾನೂನು ತೊಡಕು ನಿವಾರಿಸಿ, ಶೀಘ್ರ ಕ್ರಮವಹಿಸಲು ಒತ್ತಡ ಹಾಕಲಾಗುವುದು’ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುತ್ತೂರಿನಲ್ಲಿ ಆಗಸ್ಟ್ 15ರಂದು ನಡೆದ ರಥ ಯಾತ್ರೆಗೆ ಅಡ್ಡಿಪಡಿಸಿದ ಪ್ರಕರಣ, ಉಳ್ಳಾಲದ ಕುಟುಂಬವೊಂದಕ್ಕೆ ಐಸಿಸ್ ನಂಟು, ಸ್ಯಾಟ್ಲೈಟ್ ಕರೆಯಂತಹ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳ ಹಿಂದೆ ಯಾವುದೋ ಕಾಣದ ಶಕ್ತಿಗಳ ಕೈವಾಡ ಇರುವ ಶಂಕೆ ಇದ್ದು, ಈ ಬಗ್ಗೆ ಸಮಗ್ರ ತನಿಖೆಯಾದಾಗ ಮಾತ್ರ ಸತ್ಯಾಂಶ ಹೊರ ಬರುತ್ತದೆ’ ಎಂದು ಹೇಳಿದರು.