ಉಡುಪಿ: ಇತ್ತೀಚೆಗೆ ಶಬರಿಮಲೆ ವಿಚಾರದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪು ಅಯ್ಯಪ್ಪ ಭಕ್ತರಲ್ಲಿ ಆತಂಕ ಉಂಟುಮಾಡಿದೆ. ಸುಪ್ರೀಂಕೋರ್ಟ್ ನ ತೀರ್ಪು ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ತೀರ್ಪು ಮರುಪರಿಶೀಲನೆ ನಡೆಸಬೇಕು, ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧಿಸುವಂತೆ ಒತ್ತಾಯಿಸಿ ಉಡುಪಿಯಲ್ಲಿ ಬೃಹತ್ ಧರ್ಮಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಗುರುವಾರ ಉಡುಪಿಯ ಕೃಷ್ಣ ಮಠದಿಂದ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಹೋರಟ ಬೃಹತ್ ಧರ್ಮಜಾಗೃತಿ ಅಭಿಯಾನ ಮೆರವಣಿಗೆ ಕಲ್ಸಂಕ ಮಾರ್ಗವಾಗಿ ನಗರದ ಎಂ.ಜಿ.ಎಂ ಮೈದಾನದ ತನಕ ಸಾಗಿತು. ಮೆರವಣಿಗೆಯಲ್ಲಿ ನಾನಾ ರಾಜ್ಯದ 5 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಅಯ್ಯಪ್ಪ ನಾಮಸ್ಮರಣೆ ಹಾಗೂ ನಾಮಸಂಕೀರ್ತನೆಯೊಂದಿಗೆ ಮೆರವಣಿಗೆ ಸಾಗಿತು.
ಈ ವೇಳೆ ಮಾತನಾಡಿದ ಪೇಜಾವರ ಶ್ರೀ, ಹಿಂದೂ ಧರ್ಮಕ್ಕೆ ಇದು ಆತಂಕದ ವಿಚಾರ. ಹಿಂದೂ ಸಂಘಟನೆಯ ಕೇಂದ್ರಬಿಂದು ಶಬರಿಮಲೆ. ಧಾರ್ಮಿಕ ನಿಯಮದ ಶಿಸ್ತು ಬೆಳೆಸಿದ ಕೀರ್ತಿ ಶಬರಿಮಲೆಗಿದೆ. ಧರ್ಮ ಸಂಪ್ರದಾಯ ದ ಪರಿವರ್ತನೆ ಸುಪ್ರೀಂ ಕೋರ್ಟ್ ಕೆಲಸವಲ್ಲ. ಧರ್ಮದ ಕುರಿತು ನಿರ್ಣಯ ಮಾಡುವುದು ಸರ್ಕಾರವಲ್ಲ. ಸಂಪ್ರದಾಯ ಬದಲಾವಣೆ ಸಂತರು ಮತ್ತು ಭಕ್ತರ ಜವಾಬ್ದಾರಿ. ಹಿಂದೂ ಸಮಾಜದ ಬೆಂಬಲ ಇದ್ದರೆ ಮಾತ್ರ ಸಂಪ್ರದಾಯದಲ್ಲಿ ಪರಿವರ್ತನೆ ಆಗಬೇಕು. ಅಯ್ಯಪ್ಪ ದೇವಸ್ಥಾನದ ತೀರ್ಪು ಪುನರ್ ವಿಮರ್ಶೆ ಆಗಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಕೇರಳ ಸರ್ಕಾರ ಶೃದ್ಧಾಳುಗಳ ದೌರ್ಜನ್ಯ ಮಾಡ್ತಿದೆ. ಕೇರಳ ಸರ್ಕಾರದ ಪ್ರಜಾ ಪ್ರಭುತ್ವ ವಿರೋಧಿ ಸರ್ವಾಧಿಕಾರಿ ಧೋರಣೆ . ಭಕ್ತರ, ಮಹಿಳೆಯರ ಅಭಿಪ್ರಾಯವೇ ಅಂತಿಮ. ಹಿಂದೂ ಧರ್ಮ ಯಾವತ್ತೂ ಮಹಿಳೆಯರಿಗೆ ಅವಮಾನ ಮಾಡಿಲ್ಲ. ನಾನು ಯಾವತ್ತೂ ಸಂಪ್ರದಾಯ ಬದಲಾವಣೆಯ ಪರ ಎಂದರು. ದಲಿತರ ವಿಚಾರದಲ್ಲಿ ನಾನು ಸಂಪ್ರದಾಯ ಬದಲಾಯಿಸಿದ್ದರಲ್ಲಿ ಮೊದಲಿಗ. ರಾಮ ಮಂದಿರಕ್ಕೆ ವಿರುದ್ದ ತೀರ್ಪು ಬಂದರೂ ವಿರೋಧಿಸುತ್ತೇನೆ. ರಾಮಮಂದಿರ ವಿಚಾರದಲ್ಲೂ ಸಂತರು, ಭಕ್ತರ ತೀರ್ಮಾನವೇ ಅಂತಿಮ. ಹಿಂದೂಗಳ ಒಪ್ಪಿಗೆ ಇದ್ದರೆ ಮಾತ್ರ ಸಂಪ್ರದಾಯ ಬದಲಾಯಿಸೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ದೇವರ ಸ್ತಬ್ಧ ಚಿತ್ರ ಹಾಗೂ ಭಜನಾ ಮಂಡಳಿಗಳು ಭಾಗಿಯಾಗಿದ್ದವು. ಪಂದಳರಾಜ ಮನೆತನದ ಶಶಿಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ತೀರ್ಪನ್ನು ಮರುಪರಿಶೀಲನೆ ನಡೆಸಿ ಭಕ್ತರಿಗೆ ನ್ಯಾಯ ಒದಗಿಸಬೇಕೆಂದು ಕೋರಿದರು.