ಕಾರ್ಕಳ: ಕರ್ನಾಟಕ ರಾಜ್ಯ ಸರಕಾರ ಲೋಕೋಪಯೋಗಿ ಬಂದರು ಮತ್ತು ಒಳಸಾರಿಗೆ ಇಲಾಖೆವತಿಯಿಂದ ಮಾಳ-ಬಜಗೋಳಿಯ ಮಂಜಲ್ತಾರ್ ಎಂಬಲ್ಲಿ ಸೇತುವೆಯೊಂದು ನಿರ್ಮಾಣಗೊಂಡಿದೆ. ಇದು ತೀರಾ ಅಪಾಯಕಾರಿ ಮಟ್ಟದಾಗಿದ್ದು, ಇದರ ಇಕ್ಕೆಲೆಗಳಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಇದುವರೆಗೆ ನಡೆದಿಲ್ಲ.
ನರ್ಬಾಡ್ ಆರ್.ಐ.ಡಿ.ಎಫ್-ಎಕ್ಸ್ಐಎಕ್ಸ್ರಡಿಯಲ್ಲಿ ಮಾಳ-ಬಜಗೋಳಿ ರಸ್ತೆಯ ಕಿ.ಮೀ 7.80ರಲ್ಲಿ ಮಂಜಲ್ತಾರ್ ಸೇತುವೆಯ ಪುನರ್ ನಿರ್ಮಾಣ ನಡೆದಿದೆ. ಒಟ್ಟು 25.26 ಮೀ ಉದ್ದ ಮತ್ತು 10.00 ಮೀ ಅಗಲದ ಸೇತುವೆ(8.42 ಅಗಲದ 3 ಅಂಕಣಗಳು) ಇದಾಗಿದೆ. 80.00 ಲಕ್ಷಗಳು ಅನುಮೋದಿತ ಅಂದಾಜು ಮೊತ್ತವಾಗಿದ್ದು, ಕರ್ನಾಟಕ ಸರಕಾರದ ಅನುದಾನ ರೂ.16.00 ಲಕ್ಷಗಳು, ನಬಾರ್ಡ್ ಸಾಲ 64.00 ಲಕ್ಷಗಳಾಗಿವೆ. ಕಾಮಗಾರಿಯನ್ನು ಕುಂದಾಪುರ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ರಾಜೇಶ್ ಕಾರಂತ ವಹಿಸಿಕೊಂಡಿದ್ದಾರೆ.
2015 ಜನವರಿ 12ರಂದು ಕಾಮಗಾರಿ ಆರಂಭಗೊಂಡಿದ್ದು, ಕಾಮಗಾರಿ ಮುಗಿಸಬೇಕಾದ ದಿನಾಂಕ 2015 ನವಂಬರ್ 10 ಆಗಿರುತ್ತದೆ. ಕಾಮಗಾರಿ ಮುಗಿಸಿದ ದಿನಾಂಕ 2015 ಜೂನ್ 15 ಆಗಿರುತ್ತದೆ ಎಂದು ಇಲಾಖೆಯ ಕಡತದಲ್ಲಿ ದಾಖಲಾಗಿದೆ. ಅದರನ್ವಯ 2015 6ರಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆಯವರು ಲೋಕಾರ್ಪಣಗೈದಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿ.ಸುನೀಲ್ ಕುಮಾರ್ ವಹಿಸಿದ್ದಾರೆ.
ಅಲ್ಲಿ ನಡೆದಿರುವುದು ಅರೆಬರೆ ಕಾಮಗಾರಿ
ಬಜಗೋಳಿ ಕಡೆಯಿಂದ ಮಾಳಕ್ಕೆ ಹೋಗುವ ದಾರಿಯಲ್ಲಿ ಸಿಗುವಂತಹ ಈ ಸೇತುವೆಗೆ ಎಂಟ್ರಿಯಾಗಬೇಕಾದರೆ ಇಳಿ ಜಾರಿನಿಂದ ಅರ್ಧ ಚಂದ್ರಾಕೃತಿಯಷ್ಟು ವಾಹನವನ್ನು ತಿರುಗಿಸಬೇಕಾಗುತ್ತದೆ. ನೇರವಾಗಿ ವಾಹನ ಚಲಾಯಿಸಿದರೆ ಪ್ರಪಾತವೇ ಗತಿ. ಹಳೆ ಸೇತುವೆ ಇದ್ದಾಗ ಇಷ್ಟೊಂದು ತರದಲ್ಲಿ ತಿರುವು ಮುರುವು ಇರಲಿಲ್ಲ. ಹೊಸ ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಅದರ ರೂಪುರೇಷೆಯೂ ಅವೈಜ್ಞಾನಿಕವಾಗಿ ಬದಲಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಡಾಂಬರು ರಸ್ತೆ ಸಂಪರ್ಕಿಸುವ ಸೇತುವೆಯ ತನಕ ಇನ್ನೂ ಡಾಂಬರೀಕರಣ ನಡೆದಿಲ್ಲ. ಅಲ್ಲಿ ಬರೀ ಬೇಬಿಜಲ್ಲಿ ಪುಡಿಯ ರಾಶಿಯೇ ಕಂಡುಬರುತ್ತದೆ. ಸೇತುವೆಗೆ ಎಂಟ್ರಿಯಾಗುವ ಭಾಗದ ಇಕ್ಕೆಲೆಗಳಲ್ಲಿ ಮಣ್ಣಿನ ತಡೆಗೋಡೆ ಕಂಡುಬರುತ್ತಿದೆ. ಅದನ್ನು ಕರಿಕಲ್ಲಿನಿಂದ ನಿರ್ಮಿಸದ ಪರಿಣಾಮವಾಗಿ ಮಳೆನೀರಿನ ರಭಸಕ್ಕೆ ಮಣ್ಣು ಹೊಳೆಪಾಲಾಗಿ ಕಂದಕಗಳು ತಲೆಎತ್ತಿದೆ. ಇದರಿಂದ ಅಪಾಯಭೀತಿ ಎದುರಾಗಲಿದೆ. ನೂತನ ಸೇತುವೆ ಪರಿಸರದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸುವ ಜೊತೆಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೇತುವೆಯ ಇಕ್ಕೆಲೆಗಳಲ್ಲಿ ತಡೆಗೋಡೆ ಹಾಗೂ ಕಲ್ಲು ಬೇಲಿ ಅಳವಡಿಸಬೇಕು.