ಪುತ್ತೂರು: ಸರಕಾರಿ ಪ್ರೌಢ ಶಾಲೆಯ ಶಿಕ್ಷಕರೋರ್ವರು ಅದೇ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ಗೆ ಅಶ್ಲೀಲ ಸಂದೇಶ ರವಾನಿಸಿರುವ ಕುರಿತು ಶಿಕ್ಷಕನ ವಿರುದ್ಧ ದೂರು ಬಂದ ಘಟನೆ ಪುತ್ತೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ಪ್ರೌಢ ಶಾಲೆಯಲ್ಲಿ ಇಂಗ್ಲೀಷ್ ಭಾಷಾ ಬೋಧನೆಯ ಶಿಕ್ಷಕರಾದ ಮೈಸೂರು ಮೂಲದ ಮಂಜುನಾಥ್ ಎಂಬವರು 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದರೆಂಬ ಆರೋಪ ವ್ಯಕ್ತವಾಗಿದೆ. ಅವರು 10ನೇ ತರಗತಿಯ ವಿದ್ಯಾರ್ಥಿನಿಗೆ ತಡ ರಾತ್ರಿಯ ವೇಳೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದರೆ ಎನ್ನಲಾಗಿದ್ದು, ಈ ವಿಚಾರ ತಿಳಿದ ವಿದ್ಯಾರ್ಥಿನಿಯ ಹೆತ್ತವರು ಆ.29ರಂದು ಶಾಲೆಗೆ ಆಗಮಿಸಿ ಈ ವಿಚಾರವನ್ನು ಶಾಲೆಯ ಮುಖ್ಯ ಶಿಕ್ಷಕರ ಹಾಗೂ ರಕ್ಷಾ ಸಮಿತಿಯ ಸದಸ್ಯರ ಗಮನಕ್ಕೆ ತಂದು ಆರೋಪಿ ಶಿಕ್ಷಕನ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು ಎಂದು ತಿಳಿದು ಬಂದಿದೆ.
ಶಾಲಾ ರಕ್ಷಾ ಸಮಿತಿಯವರು ಸಭೆ ನಡೆಸಿ ವಿಚಾರಣೆ ನಡೆಸಿದ ವೇಳೆ ಆರೋಪಿ ಶಿಕ್ಷಕ ತಪ್ಪೊಪ್ಪಿಕೊಂಡರ ಎನ್ನಲಾಗಿದೆ. ಈ ವೇಳೆ ಶಾಲಾ ಬಳಿ ಜಮಾಯಿಸಿದ ವಿದ್ಯಾರ್ಥಿಗಳ ಪೋಷಕರು ಆರೋಪಿ ಶಿಕ್ಷಕನಿಗೆ ದಿಗ್ಭಂಧನ ವಿಧಿಸಲು ಮುಂದಾಗುತ್ತಿದ್ದಂತೆಯೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ಆರೋಪಿ ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದರೆಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿಯ ಹೆತ್ತವರು ನೀಡಿರುವ ದೂರಿನಂತೆ ಸಂಪ್ಯ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿ ಶಿಕ್ಷಕನ ವಿರುದ್ದ ಪ್ರಕರಣ ದಾಖಲಾಗಿದೆ.