ಮಂಗಳೂರು: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಗುರುವಾರ ತಮಿಳುನಾಡು ಕಿನಾರೆ ದಾಟಲಿದ್ದು, ಇದರ ಪರಿಣಾಮವಾಗಿ ಕರ್ನಾಟಕದಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಅರಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಗೋವಾ ಸಮೀಪದಲ್ಲಿದ್ದರೂ ಅದರ ಪರಿಣಾಮವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಲಕೊಲ್ಲಿ ಮತ್ತು ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿಯಲ್ಲಿ ಮತ್ತೆ ಉತ್ತಮ ಮಳೆ ಸುರಿಯುವ ಆತಂಕ ಎದುರಾಗಿದೆ.
ಎಲ್ಲೋ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಮೀನುಗಾರರಿಗೆ ಎಚ್ಚರಿಕೆ: ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿ ತೀರದಲ್ಲಿ ನಾಳೆ ರಾತ್ರಿ 11.30ರ ವರೆಗೆ ಅರಬಿ ಸಮುದ್ರದಲ್ಲಿ 2.5ರಿಂದ 3.2 ಮೀ. ಎತ್ತರ ಅಲೆಗಳು ಏಳುವ ಸಾಧ್ಯತೆ ಇದೆ. ಗಾಳಿ ಕೂಡ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬೀಸಲಿರುವುದರಿಂದ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಬೆಂಗಳೂರಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗೋವಾದಲ್ಲಿ ಮಲ್ಪೆಯ 2 ಬೊಟ್ ಮುಳುಗಡೆ
ಮಲ್ಪೆ: ಹವಾಮಾನ ವೈಪರೀತ್ಯದಿಂದ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕೆಗೆ ತೆರಳಿದ ಮಲ್ಪೆಯ ಎರಡು ಬೋಟುಗಳು ಮುಳುಗಡೆಯಾದ ಘಟನೆ ಗೋವಾದ ಪಣಜಿ ಸಮೀಪ ನಡೆದಿದೆ.
ಮಾತ ಜಟಿಗೈಶ್ವರ ಮತ್ತು ಪಾಲಕ್ ಬೋಟು ಮುಳುಗಡೆ ಯಾಗಿದ್ದು ಬೋಟಿನಲ್ಲಿದ್ದ ಮೀನುಗಾರರನ್ನು ಸ್ಥಳೀಯ ಮೀನುಗಾರರು ಹಾಗೂ ಗೋವಾದ ಕೋಸ್ಟ್ಗಾರ್ಡ್ ನವರು ರಕ್ಷಿಸಿ ವಾಸ್ಕೋಗೆ ಕರೆತಂದಿದ್ದಾರೆ. ಜತೆಯಲ್ಲಿದ್ದ ಮುಳುಗಡೆ ಹಂತದಲ್ಲಿದ್ದ ಕಡಲಪ್ರಿಯ ಹೆಸರಿನ ಬೋಟ್ ಅನ್ನು ರಕ್ಷಣೆ ಮಾಡಲಾಗಿದೆ.