ಪುತ್ತೂರು: ನಾಲ್ಕು ಗೋಡೆಯೊಳಗೆ ಕುಳಿತು ಪಾಠ ಕೇಳುತ್ತಾ, ಶಾಲ ಮೈದಾನದಲ್ಲಿ ಆಟವಾಡುತ್ತಾ ದಿನ ಕಳೆವ ಸುದಾನ ಶಾಲೆಯ ಆ ಮಕ್ಕಳು ಗುರುವಾರ ಗದ್ದೆಯಲ್ಲಿಯೇ ದಿನ ಕಳೆದರು.
ತಾಲೂಕಿನ ಬಲ್ನಾಡಿನ ಶಿಂಗಾಣಿ ಮನೆಯ ವಸಂತಗೌಡ ಮತ್ತು ನಾರಾಯಣ ಗೌಡರವರಿಗೆ ಸೇರಿದ ಗದ್ದೆಗೆ ಸುದಾನ ಶಾಲೆಯ 7ನೇ ತರಗತಿಯ 110 ವಿದ್ಯಾರ್ಥಿಗಳು ಆಗಸ್ಟ್ 3 ರಂದು ಭೇಟಿ ಕೊಟ್ಟರು. ಭತ್ತದ ಗಿಡ ನಾಟಿ ಮಾಡಿದ ಮಕ್ಕಳು ಗದ್ದೆ ಉಳುಮೆ, ಸಸಿ ನಾಟಿ, ಕಟಾವಿನ ರೀತಿಗಳನ್ನೆಲ್ಲಾ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಶಿಕ್ಷಕರ ಸಹಿತ ಗದ್ದೆಗೆ ಇಳಿದು ಭತ್ತದ ಗಿಡ ನಾಟಿ ಮಾಡಿ ಸಂತಸ ಪಟ್ಟರು. ಜೊತೆಗೆ ಓ……ಬೇಲೆ ಪಾಡ್ದನವನ್ನು ರಾಗವಾಗಿ ಹಾಡಿದರು.
ಶಿಂಗಾಣಿ ಕುಟುಂಬ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದು, ವಿದ್ಯಾರ್ಥಿಗಳು ಅದರ ವಿವರವನ್ನು ಪಡೆದರು. ಗೋಬರ್ ಗ್ಯಾಸ್ ಪ್ಲಾಂಟೇಶನ್, ಎರೆಹುಳಗೊಬ್ಬರ, ತರಕಾರಿ ಕೃಷಿ, ನೊಗ ನೇಗಿಲ ಬಳಕೆ, ಅಕ್ಕಿ ಮುಡಿ ಕಟ್ಟುವುದು ಹೀಗೆ ಕೃಷಿಯ ಪ್ರತಿಯೊಂದು ಹಂತದ ಅನುಭವದ ಅರಿವನ್ನು ವಿದ್ಯಾರ್ಥಿಗಳು ಪಡೆದರು. ಪ್ರಕೃತಿಯ ಮಡಿಲಲ್ಲಿ ಓಡಾಡಿದ ಮಕ್ಕಳು ಪರಿಸರದಲ್ಲಿದ್ದ ಎಲ್ಲಾ ಗಿಡ ಮರಗಳ ಹೆಸರು, ವಿವರ ಪಡೆಯುತ್ತಿದ್ದದ್ದು ಕುತೂಹಲದಿಂದ ಪರೀಕ್ಷಿಸುತ್ತಿದ್ದದ್ದು ಮಕ್ಕಳ ಕ್ರಿಯಾಶೀಲತೆಯನ್ನು ತೋರುತ್ತಿತ್ತು. ಬೆಟ್ಟ-ಗುಡ್ಡ, ಕಾಲುದಾರಿ, ತೋಡು, ಕೆರೆ, ಅಡಿಕೆಮರದ ಸಂಕ, ಗದ್ದೆಯ ಬದುವಿನಲ್ಲಿ ನಡೆದಾಡಿದ ಮಕ್ಕಳು ಪ್ರಕೃತಿಯ ಸಹ ಜತೆಯಲ್ಲಿ ಒಂದಾಗಿ ನಲಿದಾಡಿದರು. ಬೇಸಾಯಕ್ಕೆ ಸಂಬಂಧಿಸಿದ ಕನ್ನಡ ಪಾಠವೊಂದಕ್ಕೆ ಅನ್ವಯಿಸಿ ಈ ಕೃಷಿ ಪ್ರವಾಸವನ್ನ್ನು ಆಯೋಜಿಸಲಾಗಿತ್ತು.
ಈ ಕೃಷಿ ಪ್ರವಾಸದ ನೇತೃತ್ವವನ್ನು ಶಾಲಾ ಸಹಶಿಕ್ಷಕಿ ಕವಿತಾ ಅಡೂರು ವಹಿಸಿದ್ದರು. ಜೊತೆಗೆ ಸಹ ಶಿಕ್ಷಕರಾದ ಆಶಾಲತ, ಸರಸ್ವತಿ ಜಿ.ಪಿ, ಪುಷ್ಪರಾಜ, ರಾಜೇಶ್ ಸಹಕರಿಸಿದರು. ಶಾಲಾ ಸಂಚಾಲಕರಾದ ರೆ. ವಿಜಯಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾನಾಗರಾಜ್, ಆಡಳಿತ ಅಧಿಕಾರಿ ಜತ್ತಪ್ಪ ರೈ ಕುಕ್ಕುವಳ್ಳಿಯವರು ಮಾರ್ಗದರ್ಶನ ನೀಡಿದರು. ಶಿಂಗಾಣಿ ಮನೆಯವರಾದ ವಸಂತಗೌಡ, ನಾರಾಯಣಗೌಡ, ಕಮಲ, ಸರೋಜಿನಿ, ನಳಿನಿ, ತೇಜಸ್ ಮತ್ತು ಪೂರ್ಣೇಶ್ ಮಾಹಿತಿಗಳನ್ನು ನೀಡಿ ಮಕ್ಕಳ ಮನ ತಣಿಸಿದರು.