ಪುತ್ತೂರು: ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಹೋಗುತ್ತಿದ್ದ ಪಿಕಪ್ ವಾಹನವನೊಂದನ್ನು ನಗರಸಭೆ ಪೌರ ಕಾರ್ಮಿಕರು ರೆಡ್ಹ್ಯಾಂಡ್ ಆಗಿ ಹಿಡಿದ ಮತ್ತು ಪೌರಾಯುಕ್ತರು ರಸ್ತೆ ಬದಿ ತ್ಯಾಜ್ಯ ಸುರಿದ ವಾಹನ ಮಾಲಕ, ಚಾಲಕರಿಗೆ ಬರೊಬ್ಬರಿ ರೂ. 5 ಸಾವಿರ ದಂಡ ವಿಧಿಸಿದ ಘಟನೆ ಅ.30ರಂದು ನಡೆದಿದೆ.
ಪಡೀಲು ವಿವೇಕಾನಂದ ಕಾಲೇಜು ರಸ್ತೆಯ ಕಾಲೇಜು ಸಮೀಪ ಕರ್ಮಲ ಎಂಬಲ್ಲಿ ಪಿಕಪ್ ಜೀಪೊಂದು(ಕೆ.ಎ 21 ಎ 1877) ರಸ್ತೆ ಬದಿ ಬಂದು ನಿಂತ್ತಿದ್ದಲ್ಲದೆ ಜೀಪಿನಿಂದ ಇಳಿದ ಕಾರ್ಮಿಕರು ಜೀಪಿನ ಚಾಲಕನ ಸೂಚನೆಯಂತೆ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದ ವೇಳೆ ನಗರಸಭೆ ಪೌರ ಕಾರ್ಮಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಆಗಮಿಸಿದ ನಗರಸಭೆ ಆರೋಗ್ಯ ನಿರೀಕ್ಷಕ ರಾಮಚಂದ್ರ ಮತ್ತು ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿಯವರು ತ್ಯಾಜ್ಯ ಸುರಿದ ಪಿಕಪ್ ಜೀಪನ್ನು ವಶಕ್ಕೆ ಪಡೆದು ಕೊಂಡು ನಗರಸಭೆ ಪೌರಾಯುಕ್ತ ಮುಂದೆ ಹಾಜರುಪಡಿಸಿದರು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ರೂ. 5ಸಾವಿರ ದಂಡ ಪಾವತಿಸುವಂತೆ ಸೂಚಿಸಿದರು. ಪಿಕಪ್ ಜೀಪಿನ ಚಾಲಕರು ರೂ. 5 ಸಾವಿರ ದಂಡ ಪಾವತಿಸಿ ತೆರಳಿದ್ದಾರೆ.