ಉಡುಪಿ: ಬಿಜೆಪಿಯರು ಚೆನ್ನಾಗಿದ್ರೆ ಜೊತೆಗಿರ್ತಾರೆ, ಹೆಚ್ಚು ಕಡಿಮೆ ಆದ್ರೆ ಬಿಟ್ಟುಬಿಡ್ತಾರೆ. ಕೆಟ್ಟ ಗಳಿಗೆ ಬಂದಾಗ ಹಿಂದೇಟು ಹೊಡಿಯೋದು ಬಿಜೆಪಿಗೆ ಮಾಮೂಲು ಎಂದು ಜನಾರ್ದನ ರೆಡ್ಡಿ-ಬಿಎಸ್ ಯಡಿಯೂರಪ್ಪ ಭೇಟಿ ವಿಚಾರವಾಗಿ ಸಚಿವ ಜಮೀರ್ ಅಹಮ್ಮದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ ಇರೋದು. ರೆಡ್ಡಿ ಅವರ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದಾರೆ. ಬಿಜೆಪಿ ಅಂದ್ರೆ ಯೂ ಟರ್ನ್. ಬಿಜೆಪಿಯವರಿಗೆ ಇದು ಅಭ್ಯಾಸ ಆಗಿದೆ ಎಂದು ವ್ಯಂಗವಾಡಿದರು.
ಐದು ವರ್ಷ ಈ ಸರ್ಕಾರ ಇರುತ್ತೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ತಿಪ್ಪರಲಾಗ ಹಾಕಿದ್ರೂ ಏನೂ ಮಾಡೋಕಾಗಲ್ಲ ಎಂದು ಸವಾಲು ಹಾಕಿದರು. ಯಡ್ಯೂರಪ್ಪ ಆಪ್ತರೇ ನನ್ನ ಬಳಿ ಹೇಳ್ತಾ ಇದಾರೆ. ಮುರ್ನಾಲ್ಕು ತಿಂಗಳಿಂದ ಯಡಿಯೂರಪ್ಪ ನಿದ್ದೇನೆ ಮಾಡ್ತಿಲ್ವಂತೆ. ಮುಖ್ಯಮಂತ್ರಿ ಆದೆ ಅಂತ ಕನಸು ಕಾಣ್ತಾರಂತೆ. ಕನಸು ನೋಡೋದು ತಪ್ಪಲ್ಲ.. ಎಲ್ರೂ ರಾತ್ರಿ ಕನಸು ನೋಡಿದ್ರೆ, ಯಡ್ಯೂರಪ್ಪ ಹಗಲುಗನಸು ನೋಡ್ತಾರೆ ಎಂದು ಸಚಿವ ಟಾಂಗ್ ನೀಡಿದರು.
ರಾಮಮಂದಿರ ನಿರ್ಮಾಣ ವಿಚಾರವಾಗಿ ಮಾತನಾಡಿದ ಸಚಿವರು, ನಾಲ್ಕುವರೆ ವರ್ಷದಲ್ಲಿ ರಾಮಮಂದಿರ ಜ್ಞಾಪಕಕ್ಕೆ ಬಂದಿಲ್ಲ. ಲೋಕಸಭಾ ಚುನಾವಣೆ ಬಂದ್ರೆ ರಾಮಮಂದಿರ ನೆನಪಾಗುತ್ತೆ.ಮಂದಿರ ಕಟ್ಟೋಕೆ ಮುಸಲ್ಮಾನರ ವಿರೋಧ ಇಲ್ಲ. ನಮಗೆ ಮಂದಿರವೂ ಆಗ್ಬೇಕು. ಮಸೀದಿಯೂ ಆಗ್ಬೇಕು. ಸರ್ವಧರ್ಮೀಯರೂ ಸಹೋದರರಂತೆ ಬಾಳುವ ಇನ್ನೊಂದು ದೇಶ ನೋಡಿಲ್ಲ ಎಂದರು.