ಮೂಡುಬಿದಿರೆ: ಯಕ್ಷಗಾನ, ನೃತ್ಯಗಳಲ್ಲಿ ಮನೆಮಾತಾಗಿರುವ ಬಹುಮುಖ ಬಾಲಪ್ರತಿಭೆ ಪಂಚಮಿ ಮಾರೂರು, ಭಾರತ ಸರ್ಕಾರ ಮಹಿಳಾ ಹಾಗೂ ಶಿಶು ಅಭಿವೃದ್ಧಿ ಇಲಾಖೆ ರಾಷ್ಟ್ರಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯೂ ಮಕ್ಕಳ ದಿನಾಚರಣೆಗೆ ಕೊಡಮಾಡುವ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ಪಂಚ ಕ್ಷೇತ್ರ ಸಾಧಕಿ:
ಯಕ್ಷಗಾನ, ನೃತ್ಯ, ಸಂಗೀತ, ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಂಚಮಿಮೂಡುಬಿದರೆ ಜೈನ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ 8 ವರ್ಷಗಳಿಂದ ನಿರಂತರವಾಗಿ 5 ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಅರಳಿಸಿ ಜನ್ನಮನ್ನಣೆಗಳಿಸಿದ್ದಾಳೆ. 100ರಷ್ಟು ಯಕ್ಷಗಾನ ನೃತ್ಯ ವೈಭವ ಸೇರಿ 700ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾಳೆ.
ಕಿರುತೆರೆಯ ಪ್ರತಿಭಾನ್ವೇಷಣಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾಳೆ. ಝೀ ಕನ್ನಡ ಕುಣಿಯೋಣ ಬಾರಾದಲ್ಲಿ ಭಾಗವಹಿಸಿ ಬೆಸ್ಟ್ ಎಕ್ಸಪ್ರೆಶನ್ ಅವಾರ್ಡ್, ಸುವರ್ಣ ವಾಹಿನಿಯ ಪುಟಾಣಿ ಪಂಟ್ರು ರಿಯಾಲಿಟಿ ಶೋನಲ್ಲಿ ನೃತ್ಯ ಮಾಡಿ ಮುದ್ದಿನ ಪುಟಾಣಿ ಪ್ರಶಸ್ತಿಯನ್ನೂ ಗಳಿಸಿದ್ದಾಳೆ. ಝೀ ಕನ್ನಡ ವಾಹಿನಿಯ ಸೂಪರ್ ಗುರು, ಸೂಪರ್ ಶಿಷ್ಯ, ಉದಯ ಟಿ.ವಿಯ ರಿಯಾಲಿಟಿ ಶೋ.ನಲ್ಲೂ ಭಾಗವಹಿಸಿದ್ದಾಳೆ.
ಸಾಂಸ್ಕೃತಿಕ ಚಟುವಟಿಯಲ್ಲಿ ಮಾತ್ರವಲ್ಲದೇ ಶೈಕ್ಷಣಿಕವಾಗಿಯೂ ಸಾಧನೆ ಮಾಡಿರುವ ಈಕೆ, ಡಿ.ಜೆ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಶೇ.99 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ. ಭರತನಾಟ್ಯ, ಯಕ್ಷಗಾನ ಕ್ಷೇತ್ರದಲ್ಲಿ ಅರಳು ಪ್ರತಿಭೆಯಾಗಿರುವ ಈಕೆ ಕ್ರೀಡಾಪಟುವೂ ಹೌದು. ಹಾಕಿ, ಫುಟ್ಬಾಲ್, ವಾಲಿಬಾಲ್, ಶಾಟ್ಪುಟ್ಗಳಲ್ಲಿ ಭಾಗವಹಿಸಿ, ಸಾಧನೆ ಮಾಡುತ್ತಿದ್ದಾಳೆ. ಈಕೆ ಜೈನ ಪ್ರೌಢಶಾಲೆಯ ಎನ್ಸಿಸಿ ಆರ್ಮಿ ವಿಭಾಗದ ಕೆಡೆಟ್. ರಾಜ್ಯಮಟ್ಟದ 150ಕ್ಕೂ ಅಧಿಕ ಸಂಘ ಸಂಸ್ಥೆಗಳು ಈಕೆಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
ಕೌಟುಂಬಿಕವಾಗಿ ಕಲೆಯ ಹಿನ್ನಲೆಯಿಲ್ಲದ ಪಂಚಮಿ ಅಪ್ಪಟ ಗ್ರಾಮೀಣ ಪ್ರತಿಭೆ. ಟೆಂಪೋ ಡ್ರೈವರ್ ವೃತ್ತಿ ಮಾಡುತ್ತಿರುವ ತಂದೆ ಪಾಶ್ರ್ವನಾಥ ಹಾಗೂ ತಾಯಿ ಗೃಹಿಣಿ ದೀಪಶ್ರೀ ಅವರ ನಿರಂತರ ಪ್ರೋತ್ಸಾಹ ಈಕೆಯ ಸಾಧನೆಗೆ ಬೆನ್ನೆಲುಬು. ಸುಧೇಶ್ ಜೈನ್ ಮಕ್ಕಿಮನೆ ಈಕೆಗೆ ರಿಯಾಲಿಟಿ ಶೋ, ವೇದಿಕೆ ಪ್ರದರ್ಶನಗಳನ್ನು ನೀಡಲು ಮಾರ್ಗದರ್ಶಕರಾಗಿದ್ದಾರೆ. ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿ ಪಡೆಯಲು ಬೇಕಾದ ತಾಂತ್ರಿಕ ಕೆಲಸಗಳನ್ನೂ ಕೂಡ ಸುಧೇಶ್ ನಿರ್ವಹಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಗಳು ನ.14 ಮಕ್ಕಳ ದಿನಾಚರಣೆಯಲ್ಲಿ ಎರಡೂ ಪ್ರಶಸ್ತಿ ಸ್ವೀಕರಿಸಬೇಕಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವ ಇರಾದೆ ಪಂಚಮಿಯದ್ದಾಗಿದೆ.