ಉಡುಪಿ: ಇಡೀ ಕರಾವಳಿ ಬೆಚ್ಚಿ ಬೀಳುವಂತೆ ಮಾಡಿದ್ದ ಭಾಸ್ಕರ್ ಶೆಟ್ಟಿಯವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ್ ಶೆಟ್ಟಿಗೆ ಸೇರಿದ ವಾಚ್, ಮೊಬೈಲ್ ಹಾಗೂ ಕೊಲೆಗೆ ಬಳಸಿದ್ದ ರಾಡ್ ಪತ್ತೆಯಾಗಿದೆ.
ಸಿಐಡಿ ಪೊಲೀಸರು ಆರೋಪಿಗಳಾದ ಜ್ಯೋತಿಷಿ ನಿರಂಜನ್ ಹಾಗೂ ನವನೀತ್ ಶೆಟ್ಟಿ ಯನ್ನು ವಿಚಾರಣೆಗೆ ಒಳಪಡಿಸಿದ್ದಾಗ ಭಾಸ್ಕರ್ ಶೆಟ್ಟಿಯವರ ಮೊಬೈಲ್, ವಾಚ್ ಮತ್ತು ಕೊಲೆಗೆ ಬಳಸಿದ ರಾಡ್ ಅಲೆವೂರು ಸೇತುವೆಗೆ ಎಸೆದ ಬಗ್ಗೆ ಬಾಯ್ಬಿಟ್ಟ ಹಿನ್ನೆಲೆಯಲ್ಲಿ, ತಣ್ಣೀರು ಬಾವಿಯ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದು, ಕೊಲೆಗೆ ಬಳಸಲಾದ ರಾಡ್ ಪತ್ತೆ ಹಚ್ಚಲಾಗಿದ್ದು, ಈ ಸಂದರ್ಭ ಆರೋಪಿಗಳನ್ನು ಸೇತುವೆ ಬಳಿ ಕರೆತರಲಾಗಿತ್ತು. ಪತ್ತೆ ಹಚ್ಚಿದ ರಾಡ್ ಅನ್ನು ನಿರಂಜನ ಭಟ್ಟ ನಿಗೆ ತೋರಿಸಿದಾಗ ಆತ ಗುರುತಿಸಿದ್ದು, ಆದರೆ ತಾವು ಕೊಲೆಗೆ ಬಳಸಿದ ರಾಡ್ ಇದರಷ್ಟು ಭಾರವಿರಲಿಲ್ಲ ಎಂದು ಇನ್ನೊಬ್ಬ ಆರೋಪಿ ನವನೀತ್ ಶೆಟ್ಟಿ ಹೇಳಿದ್ದಾನೆ.
ಪತ್ತೆ ಹಚ್ಚಿದ ರಾಡ್ ಒಳಗೆ ಟೊಳ್ಳಾದ ಸ್ಟೀಲ್ ಪೈಪ್, ಸುಮಾರು ಒಂದೂವರೆ ಅಡಿಯಷ್ಟು ಉದ್ದವಾಗಿದ್ದು, ಅದರ ಒಂದು ತುದಿ ಹೊಡೆತಕ್ಕೆ ನುಜ್ಜಾಗಿರುವುದು ಸಿಐಡಿ ತನಿಖೆ ವೇಳೆ ತಿಳಿದುಬಂದಿದ್ದು, ಮೊಬೈಲ್ ಹಾಗೂ ವಾಚ್ ಗಳನ್ನು ಕಲ್ಕಾರು ಸಮೀಪ ಹೊಳೆಗೆ ಎಸೆದಿರುವುದರಿಂದ ಆರೋಪಿಗಳನ್ನು ಕಲ್ಕಾರಿನತ್ತ ಕರೆದೊಯ್ಯಲಾಯಿತು. ಸಿಐಡಿ ಸಿಬ್ಬಂದಿ ಸಹಿತ, ಸಿಐಡಿ ಎಸ್ಪಿ ಐಡಾ ಮಾರ್ಟಿನ್, ಡಿವೈಎಸ್ಪಿ ಚಂದ್ರಶೇಖರ್ ಈ ಸಂದರ್ಭ ವಿಚಾರಣೆ ನಡೆಸುತ್ತಿದ್ದರು.