ಮೂಡುಬಿದಿರೆ: ಶ್ರೀಕೃಷ್ಣ ಜನ್ಮಾಷ್ಟಮಿಯಂಗವಾಗಿ ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶುಕ್ರವಾರ ಸಾಂಪ್ರದಾಯಿಕವಾಗಿ ಸರಳ ರೀತಿಯಲ್ಲಿ ಮೊಸರುಕುಡಿಕೆ ಉತ್ಸವ ನಡೆಯಿತು.
ಕ್ಷೇತ್ರದಲ್ಲಿ ಮಧ್ಯಾಹ್ನ ಮಹಾಪೂಜೆಯ ಬಳಿಕ ಉತ್ಸವ ನಡೆಯಿತು. ಮೃಣ್ಮಯ ಮೂರ್ತಿಯ ಸರಳ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ಸಾಗಿತು. ಶ್ರೀ ಕೃಷ್ಣ ಕಟ್ಟೆಯ ಬಳಿ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ಅಳವಡಿಸಲಾದ 35 ಮೊಸರುಕುಡಿಕೆಗಳನ್ನು ಶ್ರೀ ಕೃಷ್ಣವೇಷಧಾರಿ ಚಂದ್ರಶೇಖರ ಕುಲಾಲ್ ಯಶೋಧೆ-ಕೃಷ್ಣ ಮೂರ್ತಿಯೊಂದಿಗೆ ಮೂಡುಬಿದಿರೆ ಮುಖ್ಯರಸ್ತೆಯಲ್ಲಿ ಯಕ್ಷಗಾನೀಯ ಶೈಲಿಯೊಂದಿಗೆ ಕುಣಿಯುತ್ತಾ ತನ್ನ ಕೈಯಲ್ಲಿದ್ದ ಚಕ್ರಾಯುಧದಿಂದ ಒಂದೊಂದೇ ಮಡಿಕೆಗಳನ್ನು ಒಡೆದರು.
ಸನ್ಮಾನ : ಚಂದ್ರಶೇಖರ ಕುಲಾಲ್ ಅವರನ್ನು ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ಗೌರವಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ನ ಗೌರವಾಧ್ಯಕ್ಷರಾದ ಶ್ರೀಪತಿ ಭಟ್, ಪ್ರಮಥ್ಕುಮಾರ್, ಅಧ್ಯಕ್ಷ ಗಣೇಶ್ರಾವ್, ಸಂಚಾಲಕ ಸಂತೋಷ್ಕುಮಾರ್, ಕ್ಷೇತ್ರದ ಆಡಳಿಯ ಮೊಕ್ತೇಸರ ಗುರುಪ್ರಸಾದ್ ಉಪಸ್ಥಿತರಿದ್ದರು.
ಪುರಮೆರವಣಿಗೆಯ ಬಳಿಕ ದೇವಳದ ಸರೋವರದಲ್ಲಿ ಮೃಣ್ಯಯ ಮೂರ್ತಿಯನ್ನು ಜಲಸ್ಥಂಭನಗೊಳಿಸಲಾಯಿತು.