ಉಳ್ಳಾಲ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್ ಮಗುಚಿ ಆರು ಮಂದಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಸಮುದ್ರತೀರದಿಂದ ಹಲವು ನಾಟಿಕಲ್ ಮೈಲ್ ದೂರದಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಘಟನೆಯಲ್ಲಿ 16 ಮಂದಿ ಮೀನುಗಾರರು ಡೆಂಗೀ( ಸಣ್ಣ ದೋಣಿ) ಮೂಲಕ ರಕ್ಷಣೆಗೆ ಒಳಗಾಗಿದ್ದಾರೆ.
ಬೋಳಾರದ ಉದ್ಯಮಿಯೋರ್ವರಿಗೆ ಸೇರಿದ ಶ್ರೀರಕ್ಷಾ ಬೋಟ್ ದುರಂತಕ್ಕೀಡಾಗಿದೆ. ಸೋಮವಾರ ನಸುಕಿನ ಜಾವ 5 ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 22 ಮಂದಿಯಿದ್ದ ಬೋಟ್ ತೆರಳಿತ್ತು. ಬೆಳಿಗ್ಗಿನಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಇಂದು ಮುಂಜಾನೆ ವಾಪಸ್ಸು ಧಕ್ಕೆ ತಲುಪುವುದಿತ್ತು. ಆದರೆ ಸಮಯ ಕಳೆದರೂ ಬೋಟ್ ವಾಪಸ್ಸಾಗದ ಹಿನ್ನೆಲೆಯಲ್ಲಿ ಬೋಟ್ ಮಾಲೀಕರು ವಯರ್ ಲೆಸ್ ಮೂಲಕ ದೋಣಿಯಲ್ಲಿದ್ದವರನ್ನು ಸಂಪರ್ಕಿಸಲು ಯತ್ನಿಸಿದಾಗ ಅಸಾಧ್ಯವಾಗಿತ್ತು. ಇದರಿಂದ ಸಂಶಯಗೊಂಡು ಉಳಿದ ಮೀನುಗಾರಿಕಾ ಬೋಟ್ ನವರನ್ನು ಸಂಪರ್ಕಿಸಿ ಬೋಟ್ ನ್ನು ಹುಡುಕುವಂತೆ ತಿಳಿಸಿದ್ದಾರೆ.
ಅದರಂತೆ ಇತರೆ ಮೀನುಗಾರಿಕಾ ಬೋಟ್ ನವರು ಆಳಸಮುದ್ರದಲ್ಲಿ ಹುಡುಕಾಟ ನಡೆಸಿದ್ದಾಗ ಒಂದು ಕಡೆಯಲ್ಲಿ ಖಾಲಿ ಬಲೆ ಮಾತ್ರ ಪತ್ತೆಯಾಗಿತ್ತು. ಅಲ್ಲಿಂದ ಹಲವು ನಾಟಿಕಲ್ ಮೈಲ್ ದೂರದಲ್ಲಿ ಡೆಂಗೀ ( ಸಣ್ಣ ದೋಣಿ) ಯಲ್ಲಿ 16 ಮಂದಿ ಕುಳಿತಿರುವುದು ಕಂಡುಬಂದಿತ್ತು. ಕೂಡಲೇ ಅವರನ್ನು ಇತರೆ ಬೋಟಿನವರು ರಕ್ಷಿಸಿದ್ದಾರೆ. ಈ ವೇಳೆ ಆರು ಮಂದಿ ಬೋಟ್ ನ ಕ್ಯಾಬಿನ್ ಒಳಗಿದ್ದವರು ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಮೀನಿನ ಭಾರ ಅಧಿಕವಾಗಿದ್ದು, ಭಾರೀ ಗಾಳಿ ಬೀಸಿದಾಗ ಒಮ್ಮಿಂದೊಮ್ಮೆಲೇ ದೋಣಿ ಮಗುಚಿದೆ ಎಂದು ರಕ್ಷಣೆಗೆ ಒಳಗಾದವರು ಇತರೆ ಮೀನುಗಾರರ ಜತೆಗೆ ತಿಳಿಸಿದ್ದಾರೆ. ಕ್ಯಾಬಿನ್ ಒಳಗಿದ್ದವರು ಅದರೊಳಗಡೆ ಬಾಕಿಯಾಗಿ ಬಲೆಯಲ್ಲಿ ಸಿಲುಕಿರುವುದರಿಂದ ಮೇಲೆ ಈಜಲು ಅಸಾಧ್ಯವಾಗಿ ಬದುಕಿ ಉಳಿಯುವ ಸಾಧ್ಯತೆಗಳು ಕಮ್ಮಿಎಂದು ಇತರೆ ಮೀನುಗಾರರು ತಿಳಿಸಿದ್ದಾರೆ. ಸದ್ಯ ಇತರೆ ಮೀನುಗಾರಿಕಾ ದೋಣಿಯವರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ದೋಣಿಯ ಅವಶೇಷ ಕೂಡ ಸಮುದ್ರದಲ್ಲಿ ಮುಳುಗಿ ಮೇಲ್ಗಡೆ ಕಾಣಿಸುತ್ತಿಲ್ಲ ಎಂದು ರಕ್ಷಣಾ ಕಾರ್ಯಾಚರಣೆ ಯಲ್ಲಿ ನಿರತ ಮೀನುಗಾರರು ತಿಳಿಸಿದ್ದಾರೆ