ಸುಳ್ಯ: ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಶುಕ್ರವಾರ ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ತಾಲೂಕು ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರಿಂದ ಅಹವಾಲನ್ನೂ ಸ್ವೀಕರಿಸಿದರು. ಪ್ರತಿ ತಿಂಗಳ ಎರಡನೇ ಶುಕ್ರವಾರ ಬೆಳಗ್ಗೆ ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಲಾಗುವುದು. ಸಾರ್ವಜನಿಕರು ಭೇಟಿಯಾಗಿ ಅಹವಾಲನ್ನು ತಿಳಿಸಬಹುದು ಎಂದು ಅವರು ಹೇಳಿದರು.
ಮರಳಿನ ಅಭಾವಕ್ಕೆ ಸದ್ಯದಲ್ಲಿಯೇ ಪರಿಹಾರ
ಸ್ಥಳೀಯವಾಗಿ ಮರಳನ್ನು ತೆಗೆಯಲು ಸುಳ್ಯ ತಾಲೂಕಿನಲ್ಲಿ ನಾಲ್ಕು ಸೇರಿದಂತೆ ಜಿಲ್ಲೆಯಲ್ಲಿ 15 ಬ್ಲಾಕ್ ಗಳನ್ನು ಗುರುತಿಸಲಾಗಿದೆ. ಇದಕ್ಕೆ ಅನುಮತಿ ದೊರೆತು ಟೆಂಡರ್ ಪ್ರಕ್ರಿಯೆ ಪೂರ್ತಿಯಾದರೆ ಇಲ್ಲಿಯೇ ಮರಳು ಲಭ್ಯವಾಗಲಿದ್ದು ಮರಳಿನ ಅಭಾವಕ್ಕೆ ಪರಿಹಾರವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಎಲ್ಲಾ ಲಾರಿಗಳಿಗೆ ಮತ್ತು ಹಡಗುಗಳಿಗೆ ಜಿಪಿಎಸ್ ಅಳವಡಿಸಲು ಸೂಚನೆ ನೀಡಲಾಗಿದೆ. ಸ್ಥಳೀಯವಾಗಿ ಮರಳು ವಿತರಿಸಲು ಆದ್ಯತೆ ನೀಡಲಾಗವುದು. ಅಂತಾ ರಾಜ್ಯಕ್ಕೆ ಮತ್ತು ಬೇರೆ ಕಡೆಗೆ ಮರಳು ಸಾಗಾಟಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆಧಾರ್ ನೋಂದಣಿ ಸಮಸ್ಯೆ
ಸುಳ್ಯ ನಗರ ಪಂಚಾಯಿತಿಯಲ್ಲಿರುವ ಆಧಾರ್ ನೋಂದಣಿ ಕೇಂದ್ರದ ಅವ್ಯವಸ್ಥೆಯ ಕುರಿತು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಗೋಕುಲ್ ದಾಸ್, ಧರ್ಮಪಾಲ ಕೊಯಿಂಗಾಜೆ ಮತ್ತು ವಕ್ತಾರ ನಂದರಾಜ ಸಂಕೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಿದರು. ಕಳೆದ ಕೆಲವು ತಿಂಗಳಿನಿಂದ ಆಧಾರ್ ನೋಂದಣಿ ಕಾರ್ಯ ಕುಂಠಿತವಾಗಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಒಂದು ಕಂಪ್ಯೂಟರ್ ಮೂಲಕ ದಿನಕ್ಕೆ ಕೇವಲ 20 ಮಂದಿಗೆ ಮಾತ್ರ ನೋಂದಣಿ ಮಾಡಲಾಗುತಿದೆ. ಸರ್ಕಾರದ ಎಲ್ಲಾ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿರುವ ಕಾರಣ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಲು ಎರಡು ಹೆಚ್ಚು ಕಂಪ್ಯೂಟರ್ ನ್ನು ಅಳವಡಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಇದಕ್ಕೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು. ಸಾರ್ವಜನಿಕರು ವಿವಿಧ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.