ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಸಿಟ್ಟುಗೊಂಡು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ವಾಪಾಸ್ಸಾದ ಘಟನೆ ಶುಕ್ರವಾರ ನಡೆಯಿತು.
1.35 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದ್ದು, ಶುಕ್ರವಾರ ಸಚಿವರಿಂದ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆಸ್ಪತ್ರೆಗೆ ಸೂಕ್ತ ವೈದ್ಯರು ಹಾಗು ಸಿಬ್ಬಂದಿಗಳನ್ನು ನೇಮಿಸಿ ನಂತರ ಉದ್ಘಾಟಿಸುವಂತೆ ಬಿಜೆಪಿ ನಾಯಕ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಜಿ.ಮೇದಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಮಾತಿನ ಚಕಮಕಿ: ಆಸ್ಪತ್ರೆಯ ಸಮೀಪ ಉಸ್ತುವಾರಿ ಸಚಿವರ ಕಾರು ಬಂದು ನಿಂತಾಗ, ಪ್ರತಿಭಟನಾಕಾರರು ಘೇರಾವ್ ಹಾಕಿದರು. ಸಿಡಿಮಿಡಿಗೊಂಡ ಸಚಿವರು ಕಾರಿನಿಂದ ಇಳಿಯಲು ಬಿಡಿ, ಆಸ್ಪತ್ರೆಯ ಒಳಗೆ ಎಲ್ಲರ ಅಹವಾಲನ್ನು ಆಲಿಸುತ್ತೇನೆ ಎಂದ ಸಚಿವರು, ಕಟ್ಟಡವನ್ನು ಉದ್ಘಾಟಿಸಿ ಒಳ ನಡೆದರು. ಕಳೆದ ಹಲವಾರು ವರ್ಷಗಳಿಂದ ಆಸ್ಪತ್ರೆಗೆ ವೈದರು ಬರುತ್ತಿಲ್ಲ. ಆರು ಸಿಬ್ಬಂದಿಗಳ ಪೈಕಿ ನಾಲ್ಕು ಮಂದಿ ಗ್ರಾಮೀಣ ಭಾಗದಲ್ಲಿ ಕರ್ತವ್ಯಕ್ಕೆ ತೆರಳುತ್ತಾರೆ. ಎಂಬಿಬಿಎಸ್ ವ್ಯಾಸಂಗ ಮಾಡಿದ ವೈದ್ಯರನ್ನು ಈ ಆಸ್ಪತ್ರೆ ಕಂಡಿಲ್ಲ. ಕೂಡಲೆ ತಜ್ಞ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಿಬೇಕು ಎಂದು ಮೇದಪ್ಪ ಒತ್ತಾಯಿಸಿದರು.
ವೈದ್ಯರನ್ನು ನೇಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಸ್ಥಳೀಯರು ಎಂಬಿಬಿಎಸ್ ಮಾಡಿದ್ದರೆ ಅವರ ಮನವೊಲಿಸಿ ಗ್ರಾಮೀಣ ಭಾಗದಲ್ಲಿ ವೈದ್ಯ ವೃತ್ತಿ ನಿರ್ವಹಿಸಲು ಮುಂದೆ ಬಂದರೆ ಜಿಲ್ಲಾಧಿಕಾರಿ ನೇಮಕಾತಿ ಮಾಡಲಿದ್ದಾರೆ ಎಂದು ಸಚಿವರು ಸಲಹೆ ನೀಡಿದರು. ಈ ಬಗ್ಗೆ ಚರ್ಚೆಯಾಗುತ್ತಿದ್ದ ಸಂದರ್ಭ ಕಾಂಗ್ರೆಸ್ ನ ಕೆಲ ಪ್ರಮುಖರು ಎಸ್.ಜಿ.ಮೇದಪ್ಪ ಅವರ ಮಗ ಹಾಗು ಸೊಸೆ ಎಂಬಿಬಿಎಸ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಮೇದಪ್ಪ ಅವರ ಮಕ್ಕಳು ಶಾಂತಳ್ಳಿ ಆಸ್ಪತ್ರೆಯಲ್ಲಿ ಕೆಲಸ ಮಾಡಬಹುದಲ್ಲವೇ? ಎಂದು ಸಚಿವರು ಹೇಳಿದರು. ಇದರಿಂದ ಅಸಮಧಾನಗೊಂಡ ಮೇದಪ್ಪ ಅವರು, ಶಾಂತಳ್ಳಿ ಆಸ್ಪತೆಗೆ ವೈದ್ಯರನ್ನು ನೇಮಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಬರೆದು ಕೊಡಲಿ ನಂತರ, ನಾನು ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.