ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಪಕ್ಷದ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಕುಮಾರ್ ಹತ್ಯೆ ಹಾಗೂ ಪಕ್ಷದ ವತಿಯಿಂದ ಬಿ.ಸಿ.ರೋಡ್ ನಲ್ಲಿ ಪ್ರತಿಭಟನೆ ವೇಳೆ ಬಂಧನಕ್ಕೊಳಗಾದ ಸಂಸದರು, ಜನಪ್ರತಿನಿಧಿಗಳು, ಕಾರ್ಯಕರ್ತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಲಾಯಿತು ಮತ್ತು ಹತ್ಯೆಗೊಳಗಾದ ಶರತ್ ಕುಮಾರ್ ಗೆ ಶ್ರದ್ಧಾಂಜಲಿ ಮೂಲಕ ಗೌರವ ಸೂಚಿಸಲಾಯಿತು.
ಶರತ್ ಕುಮಾರ್ ಹತ್ಯೆಯ ಬಳಿಕ ಸಮಾಜದ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಶರತ್ ಅಂತಿಮ ಶವ ಯಾತ್ರೆಯನ್ನು ಎಜೆ ಹಾಸ್ಪಿಟಲ್ ನಿಂದ ಬಂಟ್ವಾಳವರೆಗೆ ನಡೆಸಲಾಯಿತು. ತಾಲೂಕಿನಲ್ಲಿ ಕೆಲವು ದಿನಗಳಿಂದ ಅಶಾಂತಿಯ ಘಟನೆಗಳು, ಕೋಮುವಾದ ಜನರ ನೆಮ್ಮದಿಯನ್ನು ಕೆಡಿಸಿ ಆಕ್ರೋಶ ಸೃಷ್ಠಿಸುವ ಕಾರ್ಯ ನಡೆಯುತ್ತಿದೆ. ಬಿಜೆಪಿ 4 ವರ್ಷಗಳಿಂದ ಡ್ರಗ್ ಮಾಫಿಯಾ, ಅಕ್ರಮ ಹಣ ಸಂಗ್ರಹ ಚಟುವಟಿಕೆಗಳ ಕುರಿತು ಕ್ರಮ ಕೈಗೊಳ್ಳಲು ಆಗ್ರಹ ಮಾಡುತ್ತಿದ್ದರೂ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ಅಕ್ರಮ ಚಟುವಟಿಕೆಗಳಿಂದ ಹಣ ಸಂಗ್ರಹವಾಗುತ್ತಿದೆ ಎಂಬ ದೃಡ ಆರೋಪವನ್ನು ಮಾಡಿದರು.
40 ದಿನಗಳಿಂದ ಮೇಲ್ಪಟ್ಟು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದು ಪೊಲೀಸ್ ಹಾಗೂ ಸರ್ಕಾರದ ವೈಫಲ್ಯ ಆಡಳಿತವನ್ನು ತೋರಿಸುತ್ತದೆ. ಜಿಲ್ಲೆಯಲ್ಲಿನ ಆಡಳಿತ ಹಾಗೂ ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪ ಜನರ ಗಮನಕ್ಕೆ ಬಂದಿರಬಹುದು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದರೆ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು. ನೀಡದಿದ್ದಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆಯನ್ನು ಪಡೆಯಬೇಕು ಎಂದು ಆಗ್ರಹಿಸಿದರು.
ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ನಲ್ಲಿ ನಿರಂತರ ಪ್ರಚೋದನಕಾರಿ ಪೋಸ್ಟ್ ಗಳು ಅಪ್ ಲೋಡ್ ಆಗುತ್ತಿದ್ದು, ಜನರಲ್ಲಿ ಆಕ್ರೋಶವನ್ನು ಹೆಚ್ಚಿಸುವಂತೆ ಮಾಡುತ್ತಿದೆ. ಅಶ್ರಫ್ ಕೊಲೆ ಬಳಿಕ ಕೊಲೆ ಮಾಡಿದವರನ್ನು ಕೊಲೆ ಮಾಡದೆ ನಾವು ಮರಣ ಹೊಂದಲಾರೆವು ಎಂಬ ಪೋಸ್ಟ್ ಹಾಗೂ ಶರತ್ ಹತ್ಯೆಯಾದ ಬಳಿಕ ಎಜೆ ಹಾಸ್ಪಿಟಲ್ ನಿಂದ ಒಂದು ವಿಕೆಟ್ ಪತನ ಎಂಬ ಪೋಸ್ಟ್ ಜನರಲ್ಲಿ ಕೋಮುವಾದ ಹೆಚ್ಚಿಸಲು ಪ್ರಚೋದನಕಾರಿಯಾಗಿದೆ ಎಂದರು.
ಹಿಂದು ಹಿರಿಯ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಕುರಿತು ಇದು ಕೊನೆಯ ದಿನ ಎನ್ನುವ ರೀತಿಯಲ್ಲಿ ಹಾಕಿರುವ ಪೋಸ್ಟ್ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದ್ದು, ಅವರಿಗೆ ಭದ್ರತೆ ಒದಗಿಸುವಂತೆ ಹಾಗೂ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವವರ ವಿರುದ್ಧ ಸರಿಯಾದ ಕಾನೂನು ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಆಗ್ರಹ ಮಾಡಲಾಯಿತು.