ಬೆಳ್ತಂಗಡಿ: ಸಾಧಕರನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಬೆಳ್ತಂಗಡಿ ಪತ್ರಕರ್ತರು ಮುಂಚೂಣಿಯಲ್ಲಿದ್ದಾರೆ ಎಂದು ಶ್ರೀ.ಧ.ಮಂ. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಸತೀಶ್ಚಂದ್ರ ಹೇಳಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದವತಿಯಿಂದ ಶನಿವಾರ ನಡೆದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸಮ್ಮಾನಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಗುರುಗಳಿಗೆ ಮಹತ್ತರ ಸ್ಥಾನವಿದೆ. ಅವರು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಗುರುತಿಸಿ ಬೆಳೆಸಿದರೆ, ಪತ್ರಕರ್ತರು ಅವರನ್ನು ಸಮಾಜಕ್ಕೆ ಪರಿಚಯಿಸುತ್ತಾರೆ. ವಿವಿಧ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಯೋಗ್ಯ ವಿಚಾರವಾಗಿದೆ ಎಂದರು.
ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ನ ಪರವಾಗಿ ಅದರ ಕಾರ್ಯದರ್ಶಿ ವೀರೂ ಶೆಟ್ಟಿ, ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ಯಾಕೂಬ್ ಕೊಯ್ಯೂರು, ಡಾಕ್ಟರೇಟ್ ಪದವಿ ಪಡೆದ ಉಜಿರೆ ಧ.ಮಂ.ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ.ಭಾಸ್ಕರ ಹೆಗಡೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇತಿಹಾಸಕಾರ ಡಾ.ಯು.ಉಮಾನಾಥ ಶೆಣೈ, ದ.ಕ.ಜಿ.ಕಾ.ಪ.ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಡಾ. ವೇಣುಗೋಪಾಲ ಶರ್ಮ ಗುರುವಾಯನಕೆರೆ, ವಿಜಯಕರ್ನಾಟಕ ಪತ್ರಿಕೆಯ ಉಪಸಂಪಾದಕ ಜಿನ್ನಪ್ಪ ಗೌಡ ಬೆಳಾಲು, ಕಸ್ತೂರ್ಬಾ ಸಂಜೀವಿನಿ ಸ್ವ ಸಹಾಯ ಸಂಘ ಬೆಳಾಲು( ಅಧ್ಯಕ್ಷೆ ಮಧುರಾ), ವೀರಕೇಸರಿ ಕನ್ಯಾಡಿ ( ಸಂಘಟಕ ಸತೀಶ್ ಬೆಳ್ತಂಗಡಿ), ಕ್ರೀಡಾ ರತ್ನ ಪುರಸ್ಕೃತ ಕಂಬಳ ಓಟಗಾರ ಸುರೇಶ್ ಶೆಟ್ಟಿ ಹಕ್ಕೇರಿ ಇವರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ದ.ಕ.ಜಿ.ಕಾ.ಪ.ಸಂಘದ ಗ್ರಾಮೀಣ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಇದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಶ್ರಫ್ ಆಲಿ ಕುಂಞ್ ವಹಿಸಿದ್ದರು.
ಸಂಘದ ಕಾರ್ಯದರ್ಶಿ ಮನೋಹರ ಬಳಂಜ ಪ್ರಸ್ತಾವಿಸಿ, ಸ್ವಾಗತಿಸಿದರು. ಸದಸ್ಯ ಗಣೇಶ ಶಿರ್ಲಾಲು ವಂದಿಸಿದರು. ಉಪಾಧ್ಯಕ್ಷ ದೀಪಕ್ ಆಠವಳೆ ಕಾರ್ಯಕ್ರಮ ನಿರ್ವಹಿಸಿದರು