ಬೆಳ್ತಂಗಡಿ : ಕೊರೊನಾ ಲಾಕ್ಡೌನ್ ಸಂದರ್ಭ ಬೆಂಗಳೂರಿನಲ್ಲಿ ಉದ್ಯೋಗ್ಯದಲ್ಲಿದ್ದ ತಾಲೂಕಿನ ಜನರು ತವರೂರಿಗೆ ಬಂದಿದ್ದು, ಇದೀಗ ಲಾಕ್ಡೌನ್ ಸಡಿಲಿಕೆಯಿಂದ ಕಂಪೆನಿಗಳು ಆರಂಭವಾಗಿದ್ದು, ಮರಳಿ ಬೆಂಗಳೂರಿಗೆ ತೆರಳಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜನರ ಸಮಸ್ಯೆಗೆ ಸ್ಪಂದಿಸಿ, ಶನಿವಾರ ರಾತ್ರಿ ಬೆಂಗಳೂರಿಗೆ ತೆರಳಲು 160ಕ್ಕೂ ಹೆಚ್ಚಿನ ಮಂದಿಗೆ ಉಚಿತ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆಯಿಂದ ಬೆಂಗಳೂರಿನಲ್ಲಿ ಕೆಲವು ಕಂಪೆನಿಗಳು ಆರಂಭಗೊಂಡಿದ್ದು, ಸರಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಹಲವಾರು ಮಂದಿ ಉದ್ಯೋಗಸ್ಥರು ಉದ್ಯೋಗಕ್ಕೆ ತೆರಳಲು ಸಮಸ್ಯೆ ಎದುರಾಗಿತ್ತು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತಾಲೂಕಿನ ಯುವ ಜನತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ತಕ್ಷಣ ಸ್ಪಂದಿಸಿದ ಶಾಸಕರು ದ.ಕ. ಜಿಲ್ಲಾಡಳಿತ ಹಾಗೂ ಬೆಂಗಳೂರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸೂಕ್ತ ಸ್ಪಂದನೆ ನೀಡಿದ್ದಾರೆ.
ಪ್ರತಿಯೊಬ್ಬರು ಬೆಂಗಳೂರಿಗೆ ತೆರಳಲು ದ.ಕ. ಜಿಲ್ಲಾ ಪೋಲಿಸ್ ಇಲಾಖೆಯಿಂದ ಪಾಸ್ ಪಡೆದುಕೊಂಡು, ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಿ, ಬಸ್ಗಳಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ಕೆಎಸ್ಆರ್ಟಿಸಿ ಸಂಸ್ಥೆಯ 9 ಬಸ್ಗಳನ್ನು ಬುಕ್ಕಿಂಗ್ ಮಾಡಿ, ಒಂದು ಬಸ್ಸಿನಲ್ಲಿ 20 ಮಂದಿಯಂತೆ ಸುಮಾರು 160 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಬಸ್ಸಿನಲ್ಲಿ ಉಚಿತವಾಗಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.
ತಹಸೀಲ್ದಾರ್ ಗಣಪತಿ ಶಾಸ್ತ್ರೀ ಮತ್ತು ತಾಲೂಕು ಕಚೇರಿ ಸಿಬ್ಬಂದಿಗಳು, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಮತ್ತು ಸಿಬ್ಬಂದಿಗಳು ಪ್ರಯಾಣಿಕರ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಸರಕಾರದ ಆದೇಶದಂತೆ ಮಾಸ್ಕ್ ಹಾಗೂ ಸಾಮಾಜಿಕ ಅಂತರದಲ್ಲಿ ಬಸ್ಸಿನಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಸಕರು ಪ್ರಯಾಣಿಕರಿಗೆ ಉಪಹಾರ, ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದರು. ತಾವೇ ಸ್ವತಃ ಪ್ರಯಾಣಿಕರಿಗೆ ಉಪಹಾರವನ್ನು ಬಡಿಸಿ, ತಾವು ತೆಗೆದುಕೊಳ್ಳಬೇಕಾದ ಮುಂಜಾಗರೂಕತೆ ಕ್ರಮದ ಕುರಿತು ತಿಳಿಸಿದರು.
ಶಾಸಕರ ಕಚೇರಿ ಶ್ರಮಿಕ ತಂಡ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದರು. ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್ ಹಾಗೂ ಸುಬ್ರಹ್ಮಣ್ಯ ಗೌಡ, ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ಸೀತಾರಾಮ ಬೆಳಾಲು, ರಾಜೇಶ್ ಶೆಟ್ಟಿ, ಗಿರೀಶ್ ಡೋಂಗ್ರೆ ಮತ್ತಿತರರು ಇದ್ದರು.