ಬಂಟ್ವಾಳ: ದೇವಸ್ಥಾನಕ್ಕೆ ನಯಾಪೈಸೆ ಕೊಡದವರು ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಇವರು ಹಿಂದು ಧರ್ಮದ ರಕ್ಷಕರಾಗಲು ಹೇಗೆ ಸಾಧ್ಯ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಬಿ.ಸಿ.ರೋಡಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾನು ಮತೀಯವಾದಿಯಲ್ಲ, ಜಾತಿವಾದಿಯೂ ಅಲ್ಲ. ತನ್ನ ಧರ್ಮವನ್ನು ಆಳವಾಗಿ ಪ್ರೀತಿಸುವ ಮೂಲಕ ಇನ್ನೊಂದು ಧರ್ಮವನ್ನು ಗೌರವಿಸುತ್ತೇನೆ. ನಾವು ನಿಜವಾದ ರಾಮಭಕ್ತರು ಎಂದ ಅವರು, ಬಿಜೆಪಿಯವರು ಇನ್ನೊಂದು ಧರ್ಮವನ್ನು ಬೈಯುವ ಮೂಲಕ ಖಾಲಿ ಮತಗಳಿಕೆಯ ನಕಲಿ ರಾಮಭಕ್ತರು ಎಂದು ಹೇಳಿದರು.
ಕಾಂಗ್ರೆಸ್ ಮೈ ರಿಲಿಜಿಯನ್. ತನ್ನ ಮನೆಯೇ ಕಾಂಗ್ರೆಸ್ ಕಚೇರಿ. ತಾನು ಅಂದು ಸೋತ ದಿನದ ಮರುದಿನವೇ ಕಾಂಗ್ರೆಸ್ ಕಚೇರಿ ಹೋಗಿ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ತನ್ನ ಸಾಧನೆಯ ಬಗ್ಗೆ ಕಾರ್ಯಕರ್ತರೇ ಜನರಿಗೆ ತಿಳಿಸಬೇಕು ಎಂದರು.
ಸಮಾವೇಶದಲ್ಲಿ `ನಮ್ಮ ಬೂತ್ ನಮ್ಮ ಹೊಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಕ್ಷದ ಕಾರ್ಯಕರ್ತರು ನಮ್ಮ ಬೂತ್ ನಮ್ಮ ಹೊಣೆ ಎನ್ನುವ ದೀಕ್ಷೆಯ ಜೊತೆಗೆ ಕಾರ್ಯ ನಿರ್ವಹಿಸೋಣ ಎಂದರು.