ಪುತ್ತೂರು: ಅಡಿಕೆ ತೋಟದ ಮಧ್ಯೆ ಪ್ರಧಾನ ಉಪ ಬೆಳೆಯ ಸ್ಥಾನ ಬಾಳೆ ಕೃಷಿಗೆ. ಬಾಳೆ ಕೃಷಿ ಬೆಳೆಗಾರನ ಪಾಲಿಗೆ ಚೇತರಿಕೆ ನೀಡುವ ಕೃಷಿಯು ಹೌದು. ಉಪಬೆಳೆ ಅಲ್ಲದೇ, ಸಮತಟ್ಟು, ಗುಡ್ಡ ಪ್ರದೇಶ, ರಬ್ಬರ್ ತೋಟಗಳಲ್ಲಿ ಬಾಳೆ ಕೃಷಿ ಮಾಡಿ ಆದಾಯ ಗಳಿಸುವವರು ಅನೇಕರಿದ್ದಾರೆ. ಅಂತಹವರ ಪಾಲಿಗೆ ಈ ತಿಂಗಳು ಕಹಿ ಅನುಭವ. ಅದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಬಾಳೆಕಾಯಿ ಧಾರಣೆ ಇಳಿಮುಖ ಕಂಡಿರುವುದು.
ಬೆಳೆ ಇಳಿಕೆ
ಬಾಳೆ ಕೃಷಿ ಶ್ರಮ ಆಧಾರಿತ ಬೆಳೆ. ನಾಟಿ ಆರಂಭದಿಂದ ಫಸಲು ದೊರೆಯುವ ತನಕ ಎಚ್ಚರಿಕೆಯಿಂದ ಗಮನಿಸಬೇಕು. ನೀರು, ಗೊಬ್ಬರ, ರಭಸ ಗಾಳಿಗೆ ಮುರಿದು ಬೀಳದಂತೆ ಗೂಟದ ರಕ್ಷಣೆ ಹೀಗೆ ಹತ್ತಾರು ಕೆಲಸ ಕಾರ್ಯ ಇರುತ್ತದೆ. ಹತ್ತು ತಿಂಗಳು ಶ್ರಮಪಟ್ಟರೆ, ತೂಕ ಬರಿತ ಬಾಳೆಗೊನೆ ಸಿಗುತ್ತದೆ. ಅದಕ್ಕೆ ತಕ್ಕಂತೆ ಆದಾಯ ಕೂಡ ಸಿಗುತ್ತಿತ್ತು. ನೋಟು ನಿಷೇಧದ ಅನಂತರ ಧಾರಣೆ ಇಳಿಮುಖದತ್ತ ಸಾಗಿದೆ. ಸದ್ಯದ ಸ್ಥಿತಿಯಲ್ಲಿ ಅದು ಮೇಲೇರುವ ಲಕ್ಷಣ ಕಂಡು ಬರುತ್ತಿಲ್ಲ..!
ಧಾರಣೆಯ ಸ್ಥಿತಿ
ಕದಳಿ ಬಾಳೆಕಾಯಿಗೆ ಕೆ.ಜಿ.ಗೆ 9 ರಿಂದ 11, ನೇಂದ್ರ ಬಾಳೆಕಾಯಿಗೆ 25 ರಿಂದ 32 ರೂ., ಮೈಸೂರು ಬಾಳೆಗೆ 8 ರಿಂದ 10 ರೂ., ಗಾಳಿ ಬಾಳೆಕಾಯಿಗೆ 8 ರಿಂದ 12 ರೂ. ತನಕ ಮಾರುಕಟ್ಟೆ ಧಾರಣೆ ಇದೆ. ಈ ಹಿಂದೆ ಈ ಎಲ್ಲಾ ಬಾಳೆಕಾಯಿ ಕೆ.ಜಿ.ಗೆ ಈಗಿನ ದರದಿಂದ ಏಳೆಂಟು ರೂ. ಹೆಚ್ಚಳ ಇತ್ತು. ಮುಖ್ಯವಾಗಿ ಚಿಲ್ಲರೆ ಸಮಸ್ಯೆ, ಪೂರೈಕೆ ಕೊರತೆ, ಹಬ್ಬ ಹರಿದಿನಗಳ ಇಲ್ಲದಿರುವುದು ಮುಖ್ಯ ಕಾರಣ ಎನ್ನುತ್ತಿದೆ ಮಾರುಕಟ್ಟೆ ಮೂಲಗಳು. ಬಹಳ ಮುಖ್ಯವಾಗಿ ನೋಟಿನ ರದ್ದು ಕಾರಣವೆನಿಸಿದೆ.
ಖರೀದಿ, ಮಾರಾಟ ಕಡಿಮೆ
ಧಾರಣೆಯಲ್ಲಿ ಅಸ್ಥಿರತೆ ಇರುವ ಕಾರಣ ಬಾಳೆ ಖರೀದಿಗೂ ವ್ಯಾಪಾರಿಗಳು ಆಸಕ್ತಿ ತೋರುತ್ತಿಲ್ಲ. ಬೇಡಿಕೆ ಇರುವಷ್ಟು ಖರೀದಿಸುತ್ತಾರೆ. ಖರೀದಿಸಿದ ಬಾಳಗೊನೆಯನ್ನು ಧಾರಣೆ ಬರುವ ತನಕ ಸಂರಕ್ಷಿಸಲು ಸಾಧ್ಯವಿಲ್ಲ. ಕಾಯಿ ಹಣ್ಣಾಗುವ ಮೊದಲು ಅದು ಪೂರೈಕೆ ಆಗಿರಬೇಕು. ಇಲ್ಲದಿದ್ದರೆ ಕೊಳೆತು ಪ್ರಯೋಜನಕ್ಕೆ ಬಾರದ ಸ್ಥಿತಿ ಉಂಟಾಗುತ್ತದೆ.
ಕೊಕೊ, ಬಾಳೆಗೊನೆ ಅಂತಹ ಕೃಷಿ ಉತ್ಪನ್ನಗಳನ್ನು ಅಡಿಕೆ, ಕಾಳುಮೆಣಸಿನ ಮಾದರಿಯಲ್ಲಿ ಸಂಗ್ರಹಿಸಲು ಸಾಧ್ಯ ಇಲ್ಲ. ಧಾರಣೆಗೆ ಕಾಯದೇ ಮಾರಾಟ ಮಾಡಬೇಕು ಎಂದು ಅಸಹಾಯಕ ತೋಡಿಕೊಳ್ಳುತ್ತಾರೆ ಕೆಲ ಬೆಳೆಗಾರರು.
ಮಾರುಕಟ್ಟೆ ಸಮಸ್ಯೆ..!
ಗ್ರಾಹಕ ಬಾಳೆಕಾಯಿ ಮಾರಾಟಕ್ಕೂ ತಂದರೆ, ಇಲ್ಲಿ ಖರೀದಿದಾರಿಗೆ ಚಿಲ್ಲರೆ ಸಮಸ್ಯೆ ಉಂಟಾಗುತ್ತದೆ. ಅದರ ಜತೆಗೆ ವ್ಯಾಪಾರಸ್ಥರು ಖರೀದಿಸಿ ವಾರದೊಳಗೆ ಕಾಯಿ ವಿಲೇವಾರಿ ಮಾಡಬೇಕು. ಹೊರ ಮಾರುಕಟ್ಟೆಗಳಲ್ಲಿ ಈ ಹಿಂದಿನಂತೆ ಬೇಡಿಕೆ ಇಲ್ಲದ ಕಾರಣ, ವಿಲೇವಾರಿ ಕೂಡ ಕಷ್ಟವೆನಿಸಿದೆ. ಜತೆಗೆ ಚಿಲ್ಲರೆಯ ಅಭಾವ. ಪರಿಣಾಮ, ಬಾಳೆಕಾಯಿ ಇದ್ದರೂ, ಇವೆರಡು ಸಮಸ್ಯೆಯಿಂದ ಬಾಳೆಕಾಯಿ ಧಾರಣೆ ಕಳೆದುಕೊಳ್ಳುತ್ತಿದೆ.
ಪುತ್ತೂರು, ಸುಳ್ಯ
ಉಭಯ ತಾಲೂಕಿನಲ್ಲಿ ಅಡಿಕೆ ತೋಟದಲ್ಲಿ 95 ಶೇ. ಪ್ರಮಾಣದಲ್ಲಿ ಬಾಳೆ ಕೃಷಿ ಇದೆ. ಸುಳ್ಯ ತಾಲೂಕಿನಲ್ಲಿ ಕೇರಳದ ಕೃಷಿಕರು ಲೀಸ್ ರೂಪದಲ್ಲಿ ಬಾಳೆ ಕೃಷಿ ಮಾಡುತ್ತಾರೆ. ಲಕ್ಷಾಂತರ ವ್ಯಯಿಸಿ ಆದಾಯ ಗಳಿಸುತ್ತಾರೆ. ಅಂತಹವರ ಪಾಲಿಗೆ, ಧಾರಣೆ ಇಳಿಮುಖ ಸವಾಲು ಹೊಡ್ಡಿದೆ.