ಕಾರ್ಕಳ: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಹೆರ್ಮಂಡೆಯ ಕುಕ್ಕುದಡಿಯಲ್ಲಿ ನಡೆದಿದೆ. ಘಟನೆಯಿಂದ ತನ್ನ ಎರಡು ಕೈಗಳು ಹಾಗೂ ಕಾಲುಗಳನ್ನು ಕಳೆದುಕೊಂಡ ಮಹಿಳೆ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದಾಳೆ.
ಹೆರ್ಮಂಡೆ ಕರ್ಜಿಪಲ್ಕೆ ಮನೆಯ ಶ್ರೀಧರ್ ಪೂಜಾರಿ ಮತ್ತು ಸುಗುಣ ಪೂಜಾರಿ ಮಗಳಾದ ಅನುಶ್ರೀ (23) ಘಟನೆಯಲ್ಲಿ ಕೈ ಕಾಲು ಕಳೆದುಕೊಂಡ ಮಹಿಳೆ. ದೂರದ ಸಂಬಂಧಿಯಾಗಿರುವ ಹೆರ್ಮಂಡೆಯ ಪಟ್ರಬೆಟ್ಟು ಭೋಜ ಪೂಜಾರಿ ಹಾಗೂ ಜಯಂತಿ ದಂಪತಿಗಳ ಮಗ ಸಂತೋಷ್ ಪೂಜಾರಿ( 27) ಪ್ರಕರಣದ ಆರೋಪಿ.
ತಲವಾರು ಬೆದರಿಕೆಯೊಂದಿಗೆ ನಡೆದಿತ್ತು ವಿವಾಹ: ಸಂತೋಷ್ ಪೂಜಾರಿ ಕಳೆದ 10 ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಮುಂಬೈಗೆ ತೆರಳಿದ್ದನು. ಥಾಣೆ, ಭಾಯಂದರ್ ಮಿರಾರೋಡ್ ಮಂತ್ರ ಲಾಡ್ಜ್ ನಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿದ್ದಾನೆ.
ಅನುಶ್ರೀ ನಿಟ್ಟೆಯಲ್ಲಿ ಡಿಪ್ಲೋಮಾ ಇಂಜಿನಿಯರ್ ಮುಗಿಸಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ ಸಂತೋಷ್ ಪೂಜಾರಿ ಆಕೆಯನ್ನು ಪ್ರೀತಿ ಮಾಡಲು ಶುರುಮಾಡಿದ್ದಾನೆ. ಇದಕ್ಕೆ ಅನುಶ್ರೀ ವಿರೋಧವನ್ನು ವ್ಯಕ್ತಡಿಸಿದ್ದಾಳೆ. ಈ ವಿಚಾರ ತಿಳಿದ ಸಂತೋಷ್ ಪೂಜಾರಿ ಅದೊಂದು ದಿನ ರಾತ್ರಿ ಆಕೆಗೆ ಮನೆಗೆ ಹೋಗಿ ಬೆದರಿಸಿದ್ದಾನೆ. ಆಕೆಯನ್ನು ನನ್ನೊಂದಿಗೆ ವಿವಾಹ ಮಾಡಿ ಕೊಡದೇ ಹೋದಲ್ಲಿ ನಿಮ್ಮನ್ನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಅನುಶ್ರೀ ಮನೆಯವರು ಮಾನಸಿಕವಾಗಿ ನೊಂದು ಕೊನೆಗೆ ಮದುವೆ ಮಾಡಿಕೊಡಲು ನಿಶ್ಚಯಿಸಿದ್ದಾರೆ.
ಮನೆಯಲ್ಲಿ ನಡೆದಿತ್ತು ವಿವಾಹ: ಈ ಎಲ್ಲಾ ಬೆಳವಣಿಗೆಯ ಬಳಿಕ 2017 ಜನವರಿ 6ರಂದು ಕಾರ್ಕಳ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅನುಶ್ರೀ-ಸಂತೋಷ್ ಪೂಜಾರಿಯ ವಿವಾಹ ನೋಂದಣಿ ನಡೆದಿತ್ತು. 2017 ಮಾರ್ಚ್23ರಂದು ಅನುಶ್ರೀಯ ಅಜ್ಜಿಯ ಮನೆಯಲ್ಲಿ ಅನುಶ್ರೀ ಮತ್ತು ಸಂತೋಷ್ ಪೂಜಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ಸಂತೋಷ್ ಪೂಜಾರಿ ಕೆಲಸಕ್ಕೆಂದು ಮುಂಬಯಿಗೆ ತೆರಳಿದ್ದ. ಇತ್ತ ಮನೆಯಲ್ಲಿ ಅನುಶ್ರೀ ಒಂಟಿಯಾಗಿದ್ದಳು. ಡಿಪ್ಲೋಮಾ ಎಂಜಿನಿಯರಿಂಗ್ ಪದವಿ ಪಡೆದಿರುವ ಅನುಶ್ರೀ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದಾಳೆ. ಈ ವಿಚಾರ ತಿಳಿದ ಸಂತೋಷ್ ಆಕೆಯನ್ನು ಊರಿಗೆ ಕರೆಸಿ ನಂತರ ಮುಂಬೈಗೆ ಅವನ ಜತೆ ಕರೆದುಕೊಂಡು ಹೋಗಿದ್ದಾನೆ.
ಮುಂಬೈಯಲ್ಲಿಯೂ ಇವರಿಬ್ಬರ ದಾಂಪತ್ಯ ಸರಿಯಿಲ್ಲದೆ ಇದ್ದಾಗ ಅನುಶ್ರೀಯ ತಾಯಿ ಸುಗುಣ ಪೂಜಾರಿ ಮುಂಬಯಿಗೆ ತೆರಳಿ ಮಗಳ ದಾಂಪತ್ಯವನ್ನು ಸರಿಗೊಳಿಸುವ ಕೆಲಸವನ್ನು ಮಾಡಿದ್ದಾರೆ. ಆದರೂ ಸಾಧ್ಯವಾಗದೇ ಇದ್ದಾಗ ಅನುಶ್ರೀ ತನ್ನ ತಾಯಿಯೊಂದಿಗೆ ಊರಿಗೆ ಹಿಂತಿರುಗಿ ತವರು ಮನೆ ಸೇರಿದಳು.
ಕೊಲೆಗೆ ವ್ಯವಸ್ಥಿತ ಪ್ರಯತ್ನ: ಜನವರಿ 27 ಶನಿವಾರ ಸಂಜೆ 5.45ರ ವೇಳೆಗೆ ಅನುಶ್ರೀ ಕಾರ್ಕಳದಿಂದ ತೆಳ್ಳಾರಿಗೆ ಖಾಸಗಿ ಬಸ್ ನಲ್ಲಿ ಬಂದು ಇಳಿದಿದ್ದಾಳೆ. ಹೈಸ್ಕೂಲ್ ಎದುರಿನ ಕಾಲು ದಾರಿ ಮಾರ್ಗವಾಗಿ ಬಲಾಜೆ ತೋಟವಾಗಿ ಸ್ವರ್ಣ ನದಿ ದಾಟಿ ಹೆರ್ಮಂಡೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಆರೋಪಿ ಪತಿ ಸಂತೋಷ್ ಪೂಜಾರಿ ಏಕಾಏಕಿಯಾಗಿ ಅನುಶ್ರೀಯ ಮೇಲೆ ಎರಗಿ ಹಲ್ಲೆ ಮಾಡಿದ್ದಾನೆ.
ತನ್ನಲ್ಲಿದ್ದ ಕತ್ತಿಯಿಂದ ಆಕೆಯ ಎರಡು ಕೈಗಳನ್ನು ಹಾಗೂ ಎರಡು ಕಾಲುಗಳನ್ನು ಕಡಿದು ಹಾಕಿದ್ದಾನೆ.