ಮಂಗಳೂರು: ನಗರದ ನಂತೂರು ವೃತ್ತದಲ್ಲಿರುವ ಶಾಂತಿ ಕಿರಣದಲ್ಲಿ ನಡೆಯುತ್ತಿರುವ ಜನನುಡಿ ಕಾರ್ಯಕ್ರಮದ ಸಂಭಾಗಣಕ್ಕೆ ಪ್ರವೇಶಿಸಲು ಯತ್ನಿಸಿರುವ ಹಿಂದೂ ಜಾಗರಣ ವೇದಿಕೆಯ ನಾಲ್ಕು ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಎರಡು ದಿನಗಳ ಜನನುಡಿ ಕಾರ್ಯಕ್ರಮವು ಇಂದು ಆರಂಭಗೊಂಡಿದೆ. ಉದ್ಘಾಟನಾ ಸಮಾರಂಭದ ವೇಳೆ ಶಾಂತಿಕಿರಣದ ಆವರಣ ಪ್ರವೇಶಿಸಲು ಯತ್ನಿಸಿದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಇಬ್ಬರನ್ನು ಶರತ್ ಹಾಗೂ ಸುಭಾಷ್ ಎಂದು ಗುರುತಿಸಲಾಗಿದೆ. ಇವರು ಸಂಶಯಾಸ್ಪದ ರೀತಿಯಲ್ಲಿ ಕಾರ್ಯಕ್ರಮಕ್ಕೆ ತೆರಳಲು ಯತ್ನಿಸುತ್ತಿದ್ದರು. ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಇವರು ನಟ ಪ್ರಕಾಶ್ ರೈ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.