ಪುತ್ತೂರು: ನೆಹರೂನಗರ ಪಿ.ಜಿಯಲ್ಲಿ ವಾಸ್ತವ್ಯ ಹೊಂದಿದ್ದ ಡಿಪ್ಲೋಮ ವಿದ್ಯಾರ್ಥಿಯೋರ್ವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೂ ಹೋಗದೆ ಇತ್ತ ಕಾಲೇಜಿಗೂ ಬಾರದೆ ನಾಪತ್ತೆಯಾದ ಘಟನೆಯ ಕುರಿತು ವಿದ್ಯಾರ್ಥಿಯ ತಂದೆ ಪುತ್ತೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗುಂಡ್ಯ ಸಿರಿಬಾಗಿಲು ನಿವಾಸಿ ಸಂತೋಷ್ ಎಂಬವರ ಪುತ್ರ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ಡಿಪ್ಲೋಮೊ ವಿದ್ಯಾರ್ಥಿ ಆದರ್ಶ್(20ವ)ಅವರು ನಾಪತ್ತೆಯಾದವರು. ಆದರ್ಶ್ ಅವರು ನೆಹರುನಗರ ಗೋಪಾಲ್ ಪೂಜಾರಿ ಎಂಬವರು ನಡೆಸುತ್ತಿರುವ ಪಿ.ಜಿಯಲ್ಲಿ ಉಳಿದು ಕೊಂಡು ಕಾಲೇಜಿಗೆ ಹೋಗುತ್ತಿದ್ದರು. ಪಿ.ಜಿಯಲ್ಲಿ ಒಟ್ಟು 7 ಮಂದಿ ಜೊತೆಯಾಗಿ ಇರುತ್ತಿದ್ದವರ ಪೈಕಿ ಆದರ್ಶ್ ಅವರು ಅ.22ರಂದು ಮನೆಗೆ ಹೋಗುವುದಾಗಿ ತನ್ನ ಸ್ನೇಹಿತರ ಮತ್ತು ಪಿ.ಜಿಯ ಮಾಲಕರಲ್ಲಿ ಹೇಳಿ ಹೋಗಿದ್ದರು. ಈ ನಡುವೆ ಆತ ಮನೆಗೆ ಹೋಗಿರಲಿಲ್ಲ. ಇತ್ತ ಕಡೆ ಕಾಲೇಜಿಗೂ ಗೈರಾಗಿರುವ ಕಾರಣ ಕಾಲೇಜಿನಿಂದ ಆದರ್ಶ್ ಮನೆಗೆ ಕರೆ ಮಾಡಿ ಆದರ್ಶ್ ಕಾಲೇಜಿಗೆ ಬಾರದಿರುವುದನ್ನು ವಿಚಾರಿಸಿದಾಗ ಆದರ್ಶ್ ಅವರು ಮನೆಗೂ ಹೋಗದಿರುವುದು ಬೆಳಕಿಗೆ ಬಂದಿದೆ. ಆದರ್ಶ್ ತಂದೆ ಸಂತೋಷ್ ಅವರು ತನ್ನ ಪುತ್ರ ನಾಪತ್ತೆಯಾಗಿರುವ ಕುರಿತು ಸಂಬಂಧಿಕರ ಮತ್ತು ಕಾಲೇಜಿನಲ್ಲಿ ವಿಚಾರಿಸಿದ ಬಳಿಕ ಅ.24ರಂದು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.