ಉಳ್ಳಾಲ: ಕೇಸರೀಕರಣದ ಹೆಸರಿನಲ್ಲಿ ಹಿಂದೆ ಶಾಲೆಗಳಲ್ಲಿ ನಡೆಯುತ್ತಿದ್ದಂತಹ ಸರಸ್ವತಿ ಪೂಜೆ, ರಾಮಕೃಷ್ಣರ ಪಾಠ, ಭಜನೆಯನ್ನು ನಿಲ್ಲಿಸಿದ ಪರಿಣಾಮವಾಗಿ ಇಂದು ಮಕ್ಕಳ ಮನಸ್ಸುಗಳನ್ನು ಕೆರಳಿಸುವಂತಹ ಬ್ರೇಕ್ ಡ್ಯಾನ್ಸ್ ಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳಗಿಸುವ ಕಾರ್ಯ ಮಂದಿರದಿಂದ ಆಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಇದರ 21ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೃಷ್ಣನ ವೇಷಧಾರಿಗಳಾಗಿ, ಮಕ್ಕಳ ಮನಸ್ಸಿನಲ್ಲಿ ಕೃಷ್ಣನ ಆದರ್ಶಗಳು ನೆಲೆಯೂರಲು ಮುದ್ದುಕೃಷ್ಣ ವೇಷ ಸ್ಪರ್ಧೆ ಉತ್ತಮ ವೇದಿಕೆ. ಮೂಢನಂಬಿಕೆಯವರು ಹಿಂದೂಗಳಲ್ಲ. ಚರಾಚರ ಜೀವಿಗಳಾಗಿ ಭಗವಂತನ ಕಂಡವರು. ಪ್ರತಿಯೊಬ್ಬರಲ್ಲೂ ಭಗವಂತನಿದ್ದಾನೆ. ಆಧ್ಯಾತ್ಮ ಚಿಂತನೆ ಬೆಳಕನ್ನು ಮಕ್ಕಳ ಮನಸ್ಸಿನಲ್ಲಿ ಹಚ್ಚುವ ಮೂಲಕ ಅವರೊಳಗಿನ ಭಗವಂತನ ಕಾಣಲು ಸಾಧ್ಯ. ಇಂದಿನ ಜೀವನಶೈಲಿ ಫ್ಲಾಟ್ ನಲ್ಲಿ ಇರುವ ಕಾರಣ ತುಳಸಿಕಟ್ಟೆಯೂ ಇಲ್ಲ, ಮನೆಗಳಲ್ಲಿ ಭಜನೆಯೂ ಇಲ್ಲವಾಗಿದೆ. ಶಾಲೆಗಳಲ್ಲಿ ಕೇಸರೀಕರಣದ ಹೆಸರಿನಲ್ಲಿ ಹಿಂದಿನ ಶಾಲಾ ಸಂಸ್ಕೃತಿಗಳೆಲ್ಲವನ್ನು ನಿಲ್ಲಿಸಲಾಗಿದೆ. ಇದರಿಂದ ಮಕ್ಕಳು ಬ್ರೇಕ್ ಡ್ಯಾನ್ಸ್, ಡಿಸ್ಕೋಗಳಲ್ಲಿ ಭಾಗವಹಿಸಿ ಮನಸ್ಸು ಕೆರಳಿಸಲು ಮುಂದಾಗುತ್ತಿದ್ದಾರೆ. ಈ ನಡುವೆ ಸಂಸ್ಕೃತಿಯ ಭಾವನೆಗಳನ್ನು ಉಳಿಸುವ ಪ್ರಯತ್ನ ಮಂದಿರ, ದೇವಸ್ಥಾನಗಳಂತಹ ಪವಿತ್ರ ಸ್ಥಳಗಳಿಂದ ಆಗಬೇಕಿದೆ ಎಂದರು.