ಬೆಳ್ತಂಗಡಿ: ಧರ್ಮಸ್ಥಳ ಸ್ನಾನಘಟ್ಟ ಸುತ್ತಮುತ್ತ ನೇತ್ರಾವತಿ ನದಿಯನ್ನು ಶುಕ್ರವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನೂರಾರು ಕಾರ್ಯಕರ್ತರು ಸ್ವಚ್ಛತೆ ಕಾರ್ಯ ನಡೆಸಿದರು.
ನೇತ್ರಾವತಿ ನದಿ ಮತ್ತು ಸ್ನಾನ ಘಟ್ಟದಲ್ಲಿ ಬೆಳಗ್ಗೆ ಗಂಟೆ 6ರಿಂದ 9ರ ವರೆಗೆ ದೇವಸ್ಥಾನದ ನೌಕರರು, ವಾಹನ ಚಾಲಕರು ಮತ್ತು ಮಾಲೀಕರು, ಗ್ರಾಮಾಭಿವೃದ್ಧಿ ನೌಕರರು, ಮಹಿಳಾ ಸಂಘಟನೆಗಳು, ಊರವರು, ಗ್ರಾ.ಪಂ., ಕೆ.ಎಸ್.ಆರ್.ಟಿ.ಸಿ. ಹಾಗೂ ವಿವಿಧ ಸಂಘಟನೆಯ ಸುಮಾರು 500ಕ್ಕೂ ಹೆಚ್ಚಿನ ಜನರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
ನದಿಯಲ್ಲಿ ಪ್ರವಾಸಿಗರು ಬಿಸಾಡಿದ ಬಟ್ಟೆ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ 6 ಲಾರಿ ಹಾಗೂ 3 ಟ್ಯ್ರಾಕ್ಟರ್ ಗಳಲ್ಲಿ ಸಾಗಿಸಲಾಯಿತು.
ಸ್ವಚ್ಛತೆಯಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ಮಂದಿಗೆ ದೇವಸ್ಥಾನ ವತಿಯಿಂದ ತಿಂಡಿ ಹಾಗೂ ಗಂಜಿ ಚಟ್ನಿ ವಿತರಿಸಲಾಯಿತು.
ಮಾಧ್ಯಮದವರೊಂದಿಗೆ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ಸ್ವಚ್ಛತೆ ಬಹಳ ಅಗತ್ಯವಿತ್ತು. ಜನರಿಗೆ ಪ್ರಜ್ಞಾವಂತಿಕೆ ಕೊಡುವುದೇ ಬಹಳ ಮುಖ್ಯ. ಮೋದಿ ಸ್ವಚ್ಛ ಭಾರತ ಪರಿಕಲ್ಪನೆ ಪರಿಣಾಮಕಾರಿಯಾಗಿ ದೇಶದಲ್ಲಿ ಶೇ.50 ಯಶಸ್ವಿಯಾಗಿದೆ. ಪ್ರತಿ ಮನೆಯಲ್ಲೂ ಈ ಭಾವನೆ ಮೂಡಬೇಕು. ಹೊರ ರಾಜ್ಯದಿಂದ ಕ್ಷೇತ್ರಕ್ಕೆ ಬರುವವರಿಗೆ ಸ್ವಚ್ಛತೆ ಪ್ರಜ್ಞೆ ಕಡಿಮೆ ಇದೆ. ಈಗಾಗಲೇ ಬದಲಾವಣೆಯಾಗಿದೆ. ಸತತ ಪ್ರಯತ್ನದಿಂದ ಜನಜೀವನದಲ್ಲಿ ಇನ್ನಷ್ಟು ಬದಲಾವಣೆಯಾಗಬೇಕಿದೆ. ಊರವರು ಮತ್ತು ಧರ್ಮಸ್ಥಳ ಕ್ಷೇತ್ರದ ಮಂದಿ ನೇತ್ರಾವತಿ ಶುದ್ಧೀಕರಣದಲ್ಲಿ ಪಾಲ್ಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.