ಮಲ್ಪೆ: ಆಳಸಮುದ್ರ ಮೀನುಗಾರಿಕೆಗೆ ತೆರಳಿ ಕಳೆದ 12 ದಿನಗಳಿಂದ ನಾಪತ್ತೆಯಾಗಿರುವಂತಹ ಬೋಟ್ ನ್ನು ಅಪಹರಿಸಿರುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆ ಬೋಟು ಮುಳುಗಡೆಯಾಗಿದ್ದರೆ ಆಗ ಕುರುಹು ಸಿಗಬೇಕಿತ್ತು. ಆದರೆ ಯಾವುದೇ ಕುರುಹು ಸಿಗದ ಹಿನ್ನೆಲೆಯಲ್ಲಿ ಇದು ಅಪಹರಣವಾಗಿರುವ ಸಾಧ್ಯತೆಯು ಕಾಣಿಸುತ್ತಿದೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೋಸ್ಟ್ ಗಾರ್ಡ್, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲಿ ಇರಬಹುದು ಎನ್ನುವ ಸೂಚನೆ ಸಿಕ್ಕಿದೆ. ಆದರೆ ಇದು ಖಚಿತವಾಗಿಲ್ಲ ಎಂದರು.
ಡಿ.13ರಂದು ಮಲ್ಪೆಯಿಂದ ಆರು ಬೋಟುಗಳು ಮೀನುಗಾರಿಕೆಗೆ ತೆರಳಿದ್ದವು. ಡಿ.15ರಂದು ರಾತ್ರಿ ವೇಳೆ ಒಂದು ಗಂಟೆ ಸುಮಾರಿಗೆ ಒಂದು ಬೋಟಿನ ಸಂಪರ್ಕ ಕಡಿತವಾಯಿತು. ಸುಮಾರು 200-300 ಬೋಟಿನವರು ಹುಡುಕಾಟಕ್ಕೆ ಪ್ರಯತ್ನಿಸಿದರೂ ಪತ್ತೆಯಾಗಿಲ್ಲ. ಇದರ ಬಳಿಕ ಡಿ.22ರಂದು ದೂರು ನೀಡಲಾಗಿದೆ.