ಪುತ್ತೂರು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯ ಮಾನವ ದಿನ ಯೋಜನೆಯಲ್ಲಿ ಗ್ರಾ.ಪಂಗಳು ಸಮರ್ಪಕವಾಗಿ ಗುರಿ ಸಾಧಿಸುವಲ್ಲಿ ಹಿನ್ನಡೆಯಿರುವ ಕುರಿತು ಗ್ರಾ.ಪಂಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬೆಳಕಿಗೆ ಬಂದಿದ್ದು. ಈ ಕುರಿತು ಶಾಸಕರು ಗ್ರಾ.ಪಂ ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಅನ್ ಲಿಮಿಟೆಡ್ ಆಗಿರುವ ಒಂದು ನರೇಗ ಯೋಜನೆಯನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ಪಾಠ ಮಾಡಿದ ಬಗ್ಗೆ ಅ.23ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಅವರು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಆರಂಭದಲ್ಲಿ ಗ್ರಾ.ಪಂ ಪಿಡಿಒ ಮತ್ತು ಕಾಯದರ್ಶಿಗಳ ಪರಿಚಯ ಮಾಡಿಕೊಂಡ ಶಾಸಕರು ನರೇಗದಲ್ಲಿನ ಗುರಿಯ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಹೆಚ್ಚಿನ ಗ್ರಾ.ಪಂ ನರೇಗದಲ್ಲಿ ಗರಿಷ್ಠ ಎಂದರೆ ಶೇ.36 ಹೊಂದಿದ್ದು, ಶೇ.50ರಷ್ಟು ಗುರಿ ಸಾಧಿಸದಿರುವುದು ಶಾಸಕರಲ್ಲಿ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು. ಮುಂದೆ ಲೋಕಸಭೆ ಚುನಾವಣೆ ಬರಲಿದೆ. ಅಲ್ಲಿಯ ತನಕ 5 ತಿಂಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ವೇಗ ಕೊಡುತ್ತಿರಿ ಎಂದು ಪ್ರಶ್ನಿಸಿದ ಅವರು ಗ್ರಾ.ಪಂ.ನಲ್ಲಿ ಪಿಡಿಒಗಳ ಪಾತ್ರ ಬಹಳ ಮುಖ್ಯ. ಅಭಿವೃದ್ಧಿ ಆದರೂ, ಆಗದಿದ್ದರೂ ನೇರ ಹೊಣೆಗಾರರು ನೀವು ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರದ ನರೇಗ ಯೋಜನೆ ಒಂದು ಅನ್ಲಿಮಿಡೆಟ್ ಆಗಿರುವ ಯೋಜನೆ. ಇಂತಹ ಯೋಜನೆಯಲ್ಲಿ ಯಾಕೆ ಟಾರ್ಗೆಟ್ ರೀಚ್ ಮಾಡಲು ಆಗುವುದಿಲ್ಲ. ಈ ಕುರಿತು ಪಿಡಿಒಗಳು ಅವಾರ್ನೆಸ್ ಕ್ರಿಯೇಟ್ ಮಾಡಬೇಕು. ಗ್ರಾಮ ಮಟ್ಟದಲ್ಲಿ ಕೆಲಸಕ್ಕೆ ಬೇಡಿಕೆ ಇಲ್ಲ ಎಂದು ಹೇಳುವುದು ಬೇಡ. ನಿಮ್ಮ ಇಂಪ್ಲಿಮೆಂಟ್ನಲ್ಲಿ ಸಮಸ್ಯೆ ಇದೆ ಎಂದ ಅವರು ಪಿಡಿಒಗಳು ಆಲ್ಇನ್ ಆಲ್ ಆಗಿರಬೇಕು. ಗುರಿ ಸಾಧಿಸದಿದ್ದರೆ ಮಹಾತ್ಮರ ಹೆಸರಿನಲ್ಲಿರುವ ನರೇಗ ಯೋಜನೆಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಹೇಳಿದರು.
ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ಕೊಡಬೇಕೆನ್ನುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಈ ನಿಟ್ಟಿನಲ್ಲಿ ಮುಂದೆ ಚುನಾವಣೆಯ ಒಳಗೆ ಗುರಿ ಸಾಧನೆ ಮಾಡಬೇಕು. ನಮ್ಮ ತಾಲೂಕು ರಾಜ್ಯದಲ್ಲಿ ನಂ. ಒನ್ ಅಗಬೇಕು. ಈ ಕುರಿತು ಮುಂದೆ ಮತ್ತೊಂದು ಮೀಟಿಂಗ್ ಮಾಡುತ್ತೇನೆ ಎಂದರು.