ಬೆಳ್ತಂಗಡಿ: ಬಹು ನಿರೀಕ್ಷಿತ ಚಲನಚಿತ್ರ ಕೆಜಿಎಫ್ ಬಿಡುಗಡೆಗೆ ಪೂರ್ವಭಾವಿಯಾಗಿ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಅವರು ರವಿವಾರ ಧರ್ಮಸ್ಥಳ ಹಾಗೂ ಸೂರ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕೊಲ್ಲೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು ಸನ್ನಿಧಿ ವಸತಿ ಗೃಹಕ್ಕೆ ತೆರಳಿ, ಬಳಿಕ ಬೀಡಿಗೆ ಆಗಮಿಸಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ದೇವರ ದರ್ಶನ ಪಡೆದರು. ದೇವರ ದರ್ಶನ ಬಳಿಕ ಹೊರಬಂದು ಕಾರೊಳಗೆ ಕುಳಿತುಕೊಳ್ಳುವ ಸಂದರ್ಭ ಭಕ್ತರು ಸೆಲ್ಫಿಗಾಗಿ ಕಾರಿಗೆ ಮುಗಿಬಿದ್ದರು.
ಧರ್ಮಸ್ಥಳ ಭೇಟಿಯ ಸಂದರ್ಭ ಹೇಮಾವತಿ ವೀ.ಹೆಗ್ಗಡೆ, ಧರ್ಮಾಧಿಕಾರಿಗಳ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ದೇವಳದ ಕಚೇರಿ ಪ್ರಬಂಧಕ ಪಾರ್ಶ್ವನಾಥ್ ಜೈನ್, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಮತ್ತಿತರಿದ್ದರು.
ಮಣ್ಣಿನ ಹರಕೆಗಳಿಗೆ ಖ್ಯಾತಿ ಪಡೆದಿರುವ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಯಶ್ ಮಣ್ಣಿನ ರೀಲ್ ಅನ್ನು ದೇವರಿಗೆ ಸಮರ್ಪಿಸಿದರು. ಸುರ್ಯ ಕ್ಷೇತ್ರದಲ್ಲಿ ಟ್ರಸ್ಟಿ ಪ್ರೊ| ಸತೀಶ್ ಚಂದ್ರ ಸುರ್ಯಗುತ್ತು, ಅರ್ಚಕ ಅನಂತ್ರಾಮ ಮಯ್ಯ, ಪ್ರಕಾಶ್, ಪ್ರಸಾದ್, ಮುನಿರಾಜ ಅಜ್ರಿ, ಶ್ರೀಧರ ರಾವ್, ನಾಗರಾಜ್ ಮೊದಲಾದವರಿದ್ದರು. ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದರು.