ಬೆಳ್ತಂಗಡಿ : ಗುರುವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಎಲ್ಲಾ ಪ್ರಮುಖ ನದಿಗಳು ಹರಿಯಲು ಪ್ರಾರಂಭಿಸಿದ್ದು ಕೆಲವೆಡೆ ಹಾನಿ ಸಂಭವಿಸಿದೆ. ಮಳೆಯಿಂದಾಗಿ ರಾತ್ರಿಯಿಡಿ ವಿದ್ಯುತ್ ಕಡಿತಗೊಂಡಿದೆ.
ಕಕ್ಕಿಂಜೆ ನೆರಿಯ ಸಂಪರ್ಕ ರಸ್ತೆ ಮಧ್ಯೆ ಬೆಂದ್ರಾಳ ಎಂಬಲ್ಲಿ ಸುಮಾರು 60ಲಕ್ಷ ರೂ ವೆಚ್ಚದಲ್ಲಿ ರಸ್ತೆಗೆ ಅಡ್ಡಲಾಗಿ ಕಿರು ಸೇತುವೆಯೊಂದು ನಿರ್ಮಾಣವಾಗುತ್ತಿದ್ದು ಇದಕ್ಕೆ ಬದಲಿ ರಸ್ತೆಯಾಗಿ ತಾತ್ಕಾಲಿಕ ರಸ್ತೆಯೊಂದನ್ನು ಸನಿಹವೇ ನಿರ್ಮಿಸಲಾಗಿತ್ತು. ಅದು ನಿನ್ನೆ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಕೊಚ್ಚಿಹೋಗಿದೆ. ಇದರಿಂದ ಸಾರ್ವಜನಿಕರು ಸುತ್ತು ಬಳಸಿ ಸುಮಾರು 6 ಕಿ.ಮೀ. ಅಂತರದಲ್ಲಿ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಯಿತು.
ಮಾಹಿತಿ ತಿಳಿದು ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಸ್ಥಳಕ್ಕೆ ಪಿಡಬ್ಲೂಡಿ ಇಂಜಿನಿಯರ್ ತೌಸಿಫ್ ಅವರನ್ನು ಸ್ಥಳಕ್ಕೆ ಕರೆಸಿ ತಕ್ಷಣ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಬಳಿಕ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಇದೇ ರಸ್ತೆಯಲ್ಲಿ ಲಾರಿಯೊಂದು ಹೂತು ಹೋದ ಪರಿಣಾಮ ಮತ್ತೆ ಸಂಚಾರ ಅಸ್ಥವ್ಯಸ್ಥಗೊಂಡಿತು.
ತಡೆಗೋಡೆ ಕುಸಿತ ಪ್ರಾಣಾಪಾಯದಿಂದ ಪಾರು:
ಲಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರಬೈಲು ಎಸ್ಸಿ ಕಾಲೋನಿಗೆ ಹಾದುಹೋಗುವ ರಸ್ತೆಯಲ್ಲಿ ತಡೆಗೋಡೆಯೊಂದು ಕುಸಿದು ಸಂಚಾರಕ್ಕೆ ತಡೆಯಾಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಹೋಗುತ್ತಿದ್ದು ರಾತ್ರಿ ವೇಳೆ ಕುಸಿದಿರುವುದರಿಂದ ಅನಾಹುತ ತಪ್ಪಿದಂತಾಗಿದೆ.
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಳೆ ಆರಂಭಗೊಂಡ ದಿನದಿಂದ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ವಾಹನಗಳು ರಸ್ತೆ ಬದಿಯಲ್ಲಿ ವಾಲುವುದು, ರಸ್ತೆಗೆ ಮರ ಅಡ್ಡ ಬೀಳುವುದು, ತಿರುವಿನಲ್ಲಿ ವಾಹನ ಉರುಳುವುದು ಇತ್ಯಾದಿಗಳಿಂದ ಕಡಿದಾದ ರಸ್ತೆಯಲ್ಲಿ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ವಾಹನ ಸಂಚಾರ ಅಸ್ತವ್ಯವಸ್ತವಾಗುತ್ತಿದೆ. ಅವಘಡ ಸಂಭವಿಸಿದಾಗ ಸ್ಥಳೀಯರ, ಪ್ರಯಾಣಿಕರ ಹಾಗೂ ಆಡಳಿತದ ಸಹಕಾರದಿಂದ ರಸ್ತೆ ತೆರವು ಕೂಡು ಶೀಘ್ರವಾಗಿ ನಡೆಯುತ್ತಿರುತ್ತದೆ. ಶಿರಾಡಿ ಘಾಟಿ ರಸ್ತೆ ಸಂಚಾರಕ್ಕೆ ಮುಕ್ತವಾಗುವ ತನಕ ಚಾರ್ಮಾಡಿ ರಸ್ತೆಯಲ್ಲಿ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.
ಜಿಲ್ಲಾಧಿಕಾರಿಯವ ಆದೇಶದಂತೆ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲೆ ಕಾಲೇಜುಗಳಿಗೆ ಮಳೆ ನಿಮಿತ್ತ ರಜೆ ಘೋಷಿಸಲಾಗಿದೆ.