ಬೆಳ್ತಂಗಡಿ: ಗುಡ್ಡ ಅಗೆಯುತ್ತಿದ್ದ ವೇಳೆ ಹಿಟಾಚಿ ಯಂತ್ರದ ಮೇಲೆ ಮಣ್ಣಿನ ರಾಶಿ ಜರಿದು ಯಂತ್ರ ಹಾಗೂ ಅದರ ಚಾಲಕ ಮಣ್ಣಿನೊಳಗೆ ಸಿಲುಕಿಕೊಂಡ ಘಟನೆ ಸೋಮವಾರ ಮಡಂತ್ಯಾರು ಬಳಿ ನಡೆದಿದೆ.
ಹಿಟಾಚಿ ಅಪರೇಟರ್ ಉತ್ತರ ಪ್ರದೇಶ ಮೂಲದ ದೀಪಕ್(21) ಎಂದು ಗುರುತಿಸಲಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಡಂತ್ಯಾರು ಎಂಬಲ್ಲಿನ ರಸ್ತೆ ಬದಿ ಇರುವ ಬೃಹತ್ ಗುಡ್ಡದ ಮಣ್ಣು ತೆಗೆಯುವ ಕಾರ್ಯ ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದು ಅತೀ ಎತ್ತರ ಪ್ರದೇಶವಾದ್ದರಿಂದ ಕೆಳಗಿನಿಂದ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿತ್ತು. ಸೋಮವಾರ ಬೆಳಿಗ್ಗೆ ಅದರ ಓರ್ವ ಚಾಲಕ ಚಹಾ ಕುಡಿಯಲು ಹೋದ ವೇಳೆ ದೀಪಕ್ ಎಂಬಾತ ಮಣ್ಣು ತೆಗೆಯುವ ಕಾರ್ಯ ಪ್ರಾರಂಭಿಸಿದ್ದ.
ಆದರೆ ಈ ವೇಳೆ ಏಕಾಏಕಿ ಗುಡ್ಡ ಜರಿದು ಹಿಟಾಚಿಯ ಮೇಲೆ ಮಣ್ಣು ಬಿದ್ದಿದ್ದು ಅಪರೇಟರ್ ಸಹಿತ ಮಣ್ಣಿನೊಳಗೆ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳೀಯರು ಮಣ್ಣು ಸರಿಸಿ ಅಪರೇಟರ್ ದೀಪಕ್ ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.