ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ನಲ್ಲೇ ದನದ ಮಾಂಸ ಸಾಗಾಟದ ಪ್ರಕರಣ ಪುತ್ತೂರಿನಲ್ಲಿ ನಡೆದಿದ್ದು, ಪುತ್ತೂರು ಹರಿಹರ ಬಾಳುಗೋಡು ಬಸ್ನಲ್ಲಿ ದನದ ಮಾಂಸ ಪತ್ತೆಯಾಗಿದೆ. ಆರೋಪಿ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಹರಿಹರ ಬಾಳುಗೋಡು ಕೆ.ಎಸ್.ಆರ್.ಟಿ.ಸಿ ಬಸ್ನ ನಿರ್ವಾಹಕ ಬೆಳಗಾವಿ ಪಶುವಾಪುರ ನಿವಾಸಿ ಸುನಿಲ್(44ವ)ರವರು ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಬಸ್ನ ಹಿಂಬದಿಯ ಸೀಟ್ನ ಅಡಿಯಲ್ಲಿ ಇಟ್ಟಿದ್ದ 9 ಕೆ.ಜಿ ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಪುತ್ತೂರಿನಿಂದ ಹರಿಹರ ಬಾಳುಗೋಡಿಗೆ ಬೆಳಿಗ್ಗೆ ಗಂಟೆ 6.30ಕ್ಕೆ ಹೊರಟ ಬಸ್(ಕೆ.ಎ.19 ಎಫ್ 3151)ರಲ್ಲಿ ದನದ ಮಾಂಸ ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಗಡಿಪಿಲ ಸಮೀಪ ಸುಮಾರು 7 ಗಂಟೆಗೆ ಬಸ್ ಅನ್ನು ತಪಾಸಣೆಗೊಳಪಡಿಸಿದರು.
ಈ ವೇಳೆ ಬಸ್ನ ಹಿಂಬದಿ ನಿರ್ವಾಹಕ ಸೀಟ್ ಬಳಿ ಇದ್ದ ಗೋಣಿ ಚೀಲವೊಂದರಲ್ಲಿ ದನದ ಮಾಂಸ ಪತ್ತೆಯಾಗಿದೆ. ಪುತ್ತೂರು ನಗರ ಠಾಣೆಯ ಪೊಲೀಸರು ಬಸ್ ಮತ್ತು ದನದ ಮಾಂಸವನ್ನು ವಶಕ್ಕೆ ಪಡೆದು ಕೊಂಡು ಆರೋಪಿ ಬಸ್ ನಿರ್ವಾಹಕ ಸುನಿಲ್ ಅವರನ್ನು ಬಂಧಿಸಿದ್ದಾರೆ.
ನಿರಂತರ ನಡೆಯುತ್ತಿರುವ ದಂಧೆ: ದನದ ಮಾಂಸ ಬಸ್ನಲ್ಲಿ ಸಾಗಾಟ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದ್ದೆ ಎಂದು ತಿಳಿದು ಬಂದಿದೆ.
ಮೈಸೂರು ಕಡೆಯಿಂದ ದನದ ಮಾಂಸ ಪುತ್ತೂರಿಗೆ ಬಂದು ಇಲ್ಲಿಂದ ಅದು ಬೇರೆ ಬೇರೆ ಕಡೆ ವಿತರಣೆ ನಡೆಯುತ್ತಿದೆ. ದನದ ಮಾಂಸ ಅಕ್ರಮ ಸಾಗಾಟಕ್ಕೆ ಎಲ್ಲೂ ದಾರಿ ಇಲ್ಲವೆಂದಾಗ ಸುಲಭದ ದಾರಿಯಾಗಿ ಬಸ್ನ್ನು ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ.
ದನದ ಮಾಂಸ ಬಸ್ನಲ್ಲಿ ಪತ್ತೆಯಾದ ಕ್ಷಣ ನಿರ್ವಾಹಕ ಈ ಕುರಿತು ನನಗೇನು ತಿಳಿದಿಲ್ಲ. ಯಾರೋ ಸೊತ್ತು ಇಟ್ಟು ಹೋಗಿದ್ದಾರೆ. ಪಂಜದಲ್ಲಿ ಕಲೆಕ್ಷನ್ ಮಾಡುತ್ತಾರೆ ಎಂದಿದ್ದ. ಈ ನಿಟ್ಟಿನಲ್ಲಿ ಬಸ್ ನೇರವಾಗಿ ಪಂಜಕ್ಕೆ ಹೋದಾಗ ಅಲ್ಲಿಗೆ ಯಾರೂ ಕೂಡಾ ಸೊತ್ತು ಕೊಂಡೊಯ್ಯಲು ಯಾರೂ ಬಂದಿರಲಿಲ್ಲ. ಈ ನಿಟ್ಟಿನಲ್ಲಿ ಬಸ್ ನಿರ್ವಾಹಕನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.