ಉಡುಪಿ: ಹೆಚ್ಚಾಗಿ ಮೀನುಗಾರರು ಸಮುದ್ರಕ್ಕೆ ತೆರಳಿ ಬಲೆ ಬೀಸಿ ಮೀನನ್ನು ಹಿಡಿದು ತರುತ್ತಾರೆ. ಆದ್ರೆ ಉಡುಪಿಯ ಕುಂದಾಪುರದ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜಾಡುವ ಮೀನುಗಳು ಗಾಳಿಯಲ್ಲಿ ಹಾರಾಡಿಕೊಂಡು ಭೂಮಿಯತ್ತ ಬಂದು ಜನರಲ್ಲಿ ಕೌತುಕ ಹುಟ್ಟಿಸಿವೆ.
ಇಂದು ಮುಂಜಾನೆ ವೇಳೆ ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಬೀಚಲ್ಲಿ ಈ ಘಟನೆ ನಡೆದಿದೆ. ಕೋಡಿಯ ಮೀನುಗಾರರು ಅರಬ್ಬೀ ಸಮುದ್ರದ ದಡದಲ್ಲಿ ಬಲೆ ಹಾಕಿದ್ದರು. ಎಲ್ಲಾ ಮೀನುಗಾರರು ಸಾಲಾಗಿ ನಿಂತು ದಡದ ಕಡೆ ಬಲೆ ಎಳೆಯುವಾಗ ನಿರೀಕ್ಷೆ ಮೀರಿ ನೂರು ಪಟ್ಟು ಹೆಚ್ಚು ಮೀನು ಬಲೆಗೆ ಬಿದ್ದಿದೆ.
ಸಮುದ್ರ ತೀರದಲ್ಲಿ ಮೀನುಗಾರರು ಎರಡು ನಾಡದೋಣಿಗಳಿಗೆ ಜೋಡು ಬಲೆ ಕಟ್ಟಿ ಮೀನುಗಾರಿಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಚಾರ ಹೊರಟ ಮೀನಿನ ಬುಗ್ಗೆ ನಾಡದೋಣಿಗಳ ಬಲೆಗೆ ಸಿಲುಕಿದೆ. ಇಡೀ ದೋಣಿಯ ಸುತ್ತಲೂ ರಾಶಿ ರಾಶಿ ಮೀನು ಸೆರೆ ಸಿಕ್ಕಿದ ವೀಡಿಯೋ ಲಭ್ಯವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿದೆ. ಕರಾವಳಿ ಫ್ರೆಂಡ್ಸ್ ಬಲೆಗೆ ಮೂರು ಸಾವಿರ ಕೆಜಿಯಷ್ಟು ಬೂತಾಯಿ ಸಿಕ್ಕಿದೆ. ಮೀನುಗಳು ಒದ್ದಾಡುವ ರಭಸಕ್ಕೆ ಬಲೆಯೇ ಹರಿದು 10 ಸಾವಿರ ಕೆಜಿಯಷ್ಟು ಮೀನು ಮತ್ತೆ ಸಮುದ್ರ ಪಾಲಾಗಿದೆ ಅಂತ ಸ್ಥಳೀಯರು ಹೇಳಿದ್ದಾರೆ.
ಮೀನುಗಾರರ ಹಾಕಿದ್ದ ಬಲೆಯಲ್ಲಿ 16 ಮಂದಿ ಮೊದಲು ಬಲೆ ಬೀಸಿದ್ದು, ಮೀನಿನ ರಾಶಿಯನ್ನು ಕಂಡು ಸ್ಥಳೀಯ 50ಕ್ಕು ಹೆಚ್ಚು ಯುವಕರನ್ನು ಕರೆಸಲಾಯ್ತು. ಸ್ಥಳೀಯರಂತೂ ಬಲೆಯಿಂದ ಜಿಗಿದು ದಡ ಸೇರಿದ್ದ ಮೀನನ್ನು ಹಿಡಿಯಲು ಬೀಚ್ ಬದಿ ಮುಗಿಬಿದ್ದು ಹಬ್ಬದ ವಾತಾವರಣ ಉಂಟುಮಾಡಿದೆ.