ಬಂಟ್ವಾಳ: ಹಾಲೆ ಮರದ ಕೆತ್ತೆಯೆಂದು ಭಾವಿಸಿ ಬೇರೊಂದು ಮರದ ಕೆತ್ತೆಯ ಕಷಾಯ ತಯಾರಿಸಿ ಸೇವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಅಸ್ವಸ್ಥಗೊಂಡ ಘಟನೆ ಪಂಜಿಕಲ್ಲು ಗ್ರಾಮದಲ್ಲಿ ನಡೆದಿದೆ.
ಇಲ್ಲಿಗೆ ಸಮೀಪದ ಕೇಲ್ದೋಡಿ ನಿವಾಸಿಗಳಾದ ವಸಂತ ಪೂಜಾರಿ (48) ಅವರ ಮಕ್ಕಳಾದ ಅಶ್ವಿತಾ(17) ಹಾಗೂ ಅನ್ವಿತಾ(15) ಅಸ್ವಸ್ಥಗೊಂಡವರು. ಆಟಿ ಅಮವಾಸ್ಯೆಯ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ವಸಂತ ಪೂಜಾರಿಯವರ ಪತ್ನಿ ಪುಷ್ಪಾ ಅವರು ಹಾಲೆ ಮರವೆಂದು ಭಾವಿಸಿ ಮನೆ ಹತ್ತಿರದ ಕನಪಾಲೆ ಎಂಬ ಮರದ ಕೆತ್ತೆಯನ್ನು ತಂದು ಮನೆಯಲ್ಲಿ ಕಷಾಯ ಮಾಡಿದ್ದರು. ಬಳಿಕ ತನ್ನ ಪತಿ ವಸಂತ ಪೂಜಾರಿಯವರಿಗೆ ಮತ್ತು ಇಬ್ಬರು ಮಕ್ಕಳಿಗೆ ಕಷಾಯ ನೀಡಿದ್ದು, ಅವರು ಸೇವಿಸಿದ ತಕ್ಷಣವೇ ವಿಪರೀತ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆ ಕುರಿತಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ಬಂದಿದ್ದು, ಅಸ್ವಸ್ಥ ಗೊಂಡವರಿಂದ ಮಾಹಿತಿ ಪಡೆದುಕೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ತಿಳಿಸಿದ್ದಾರೆ.
ಸೂಕ್ತ ಚಿಕಿತ್ಸೆ- ಡಾ.ಕಿರಣ್
ಮೂವರಿಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಅವರು ಕೆತ್ತೆ ತೆಗೆದಿರುವ ಮರದಲ್ಲಿ ವಿಷಮಯ ಅಲ್ಲದಿರುವುದರಿಂದ ಭಾರೀ ಅನಾಹುತ ತಪ್ಪಿದೆ, ಆದರೆ ಆ ಮರದ ಒಗರು ಅವರ ದೇಹಸ್ಥಿತಿಯಲ್ಲಿ ಏರುಪೇರು ಮಾಡಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ.ಕಿರಣ್ ತಿಳಿಸಿದ್ದಾರೆ.