ಬೆಳ್ತಂಗಡಿ: ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಆವಿಷ್ಕಾರಗಳು ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ ಎಂದು ಚಂದ್ರಯಾನ- 2 ತಂಡದ ಸದಸ್ಯ, ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಚಾನ್ಸಲರ್ ಡಾ. ಬಿ.ಎನ್ ಸುರೇಶ್ ಹೇಳಿದರು.
ಎಸ್.ಡಿ.ಎಂ ಸಂಸ್ಥೆಯು ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ‘ಚಂದ್ರಯಾನ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿಜ್ಞಾನ ಹೊಸ ಆವಿಷ್ಕಾರಗಳಿಗೆ ಆಧಾರವಾಗಿರುತ್ತದೆ. ಈ ಅವಿಷ್ಕಾರಗಳನ್ನು ಕೇಂದ್ರೀಕರಿಸಿಕೊಂಡ ವೈಜ್ಞಾನಿಕವಾಗಿ ಬೆಳವಣಿಗೆಯು ಭಾರತದ ಪ್ರಗತಿಯನ್ನು ಉಜ್ವಲಗೊಳಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಪರಸ್ಪರ ಪೂರಕವಾಗಿದ್ದು ಇದರ ಬಳಕೆಯಿಂದ ದೇಶದ ಉತ್ತಮ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಸೋಲು ಗೆಲುವಿನ ಮೆಟ್ಟಿಲಾಗಬೇಕೇ ಹೊರತು ಸೋತೆವೆಂದು ಹಿಂದೇಟು ಇಡಬಾರದು. ಪ್ರಮುಖವಾಗಿ ವಿಜ್ಞಾನ ಲೋಕದಲ್ಲಿ ಮೊದಲ ಪ್ರಯತ್ನಕ್ಕೆ ಪ್ರತಿಫಲ ಸಿಗುವುದು ತುಂಬಾ ಕಡಿಮೆ. ಈ ಹಿಂದಿನ ವಿಫಲತೆಗೆ ಕಾರಣವನ್ನು ತಿಳಿದುಕೊಂಡು ಆವಿಷ್ಕಾರ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ವೈಜ್ಞಾನಿಕ ಸಂಶೋಧನೆಯು ಎಲ್ಲಾ ಕ್ಷೇತ್ರಗಳಿಗೂ ಸಹಾಯಕವಾಗುತ್ತದೆ. ಎಲ್ಲಾ ಕಾಲಕ್ಕೂ ಸಲ್ಲುವ ಕಾಣ್ಕೆಗಳನ್ನು ನೀಡಲು ನೆರವಾಗುತ್ತದೆ. ಭೂತಕಾಲದ ಸಂಗತಿಗಳನ್ನು ನಿಖರವಾಗಿ ತಿಳಿದುಕೊಳ್ಳಲು ಮತ್ತು ಭವಿಷ್ಯವನ್ನು ವೈಜ್ಞಾನಿಕವಾಗಿ ಸ್ಪಷ್ಟಪಡಿಸಿಕೊಳ್ಳಲು ವಿಜ್ಞಾನದ ಪ್ರಜ್ಞೆಯಿಂದ ಮಾತ್ರ ಸಾಧ್ಯ ಎಂದರು.
ಜ್ಞಾನವು ಜ್ಞಾನವನ್ನು ನೀಡಿದರೆ, ಆ ಜ್ಞಾನವನ್ನು ನಮ್ಮ ದೈನಂದಿನ ಜೀವನದಲ್ಲಿ ಸುತ್ತಮುತ್ತ ನಡೆಯುವ ಘಟನೆಗಳನ್ನು ಕುತೂಹಲದಿಂದ ವೀಕ್ಷಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಬೇಕು. ಯುವ ಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಹಾಗೂ ಹೊಸ ಆವಿಷ್ಕಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ವರದಾನವಾಗಬೇಕು. ನಿತ್ಯವೂ ವಿಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತವೆ. ಕೃಷಿ ಹಾಗೂ ನೀರಿನ ಬಳಕೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ತುಂಬಾ ಉಪಯುಕ್ತವಾಗಿದೆ ಎಂದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಗಗನಯಾನದ ವೈಜ್ಞಾನಿಕ ಸ್ವರೂಪ ಪರಿಚಯಿಸಿದರು. ಚಂದ್ರನ ಮೇಲೆ ಹೀಲಿಯಂ 3 ಇದೆ ಎಂದು ತಿಳಿದಾಗಿನಿಂದ ಹಲವು ದೇಶಗಳ ಕಣ್ಣು ಬಿದ್ದಿದೆ. ಚಂದ್ರನಿಂದ ಒಂದು ಟ್ರಕ್ ಹೀಲಿಯಂ ತಂದರೆ ಎರಡು ದಶಕ ಭೂಮಿಯ ಸಂಪನ್ಮೂಲ ಉಪಯೋಗಿಸದೇ ಕಳೆಯಬಹುದು. ದೇಶವನ್ನು ಮತ್ತಷ್ಟು ಬಲಿಷ್ಠ ದೇಶವನ್ನಾಗಿ ರೂಪಿಸಲು ಚಂದ್ರನ ಸಂಪನ್ಮೂಲ ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಸತೀಶ್ಚಂದ್ರ ಮಾತನಾಡಿದರು. ಪ್ರೊ.ಬಿ.ಎ. ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.